nil
ನರಸಿಂಹಮೂರ್ತಿ ಎಂ ಎಸ್
#
ಕನ್ನಡದಲ್ಲಿ ಮಕ್ಕಳ ಕಾವ್ಯ ಬೆಲ್ಲದಚ್ಚಿನಂತೆ ಒಂದು ಚೌಕಟ್ಟಿಗೆ ಒಳಪಟ್ಟಿತ್ತು. ಯಾವ ಆಲೆಮನೆಯಲ್ಲಿ ತಯ್ಯಾರಾದರೂ, ಕಂಡರೂ ಒಂದೇ ತರಹ; ತಿಂದರೂ ಒಂದೇ ರುಚಿ. ಆಗ ಮಕ್ಕಳೂ ಅದನ್ನೇ ಇಷ್ಟಪಟ್ಟು ತಿನ್ನುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ; ಮಕ್ಕಳೂ ಬದಲಾಗಿದ್ದಾರೆ ಈಗಿನ ಕಾಲದ ಮಕ್ಕಳ ಪರಿಸರ, ದೃಷ್ಟಿ, ಆಶಯ, ಚಿಂತನೆ ಎಲ್ಲವೂ ನಮಗೆ ನಿಲುಕದ್ದು. ಇಂಥ ಕಾಲಘಟ್ಟದಲ್ಲಿ ಸಹೃದಯ ಮಿತ್ರರಾದ ಸುರೇಶ ಕಂಬಳಿಯವರು ಮಕ್ಕಳ ಕೈಗೆ 'ನೀಲಿಕೊಡೆ' ಎಂಬ ಕವನ ಸಂಕಲನ ನೀಡಿ ಸಂತುಷ್ಟಗೊಳಿಸಲು ಹೊರಟಿದ್ದಾರೆ. ಏನೋ ಹೊಸತನ್ನು ಕೊಡಬೇಕೆಂಬ ಮನಸ್ಸು ಮಾಡಿದ್ದಾರೆ. ಅವರ ಪ್ರಯತ್ನ ಯಶದ ಹಾದಿಯಲ್ಲಿದೆ. ಆರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ. ಈಗ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿರುವ ಕಂಬಳಿಯವರಿಗೆ ಸದಾ ಮಕ್ಕಳ ಒಡನಾಟದ ಸೌಭಾಗ್ಯವಿದೆ. ಈಗಾಗಲೇ ಎರಡು ಮಕ್ಕಳ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಈ ಹೊಸ ಸಂಕಲನದಲ್ಲಿ ಅವರ ಕಾವ್ಯದ ವಸ್ತುಗಳು ಹಳೆಯದಾಗಿ ತೋರಿದರೂ ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುತ್ತವೆ. ಚಂದ ಚಂದ ಮಾತನಾಡುವ 'ಮುದ್ದು ತಂಗಿ', ಮಕ್ಕಳಾಟಿಕೆ ಅಡ್ಡಿಪಡಿಸಿಯೂ ಖುಷಿ ಕೊಡುವ 'ಮಳೆ'ಯಂತಹ ಸೆಳೆಯುವ ಕವಿತೆಗಳೂ ಇಲ್ಲಿವೆ. ನಾಟಕ, ಚಿತ್ರಗೀತೆ, ಕಿರುಚಿತ್ರ ನಿರ್ದೇಶನ, ಮಕ್ಕಳ ಸಾಹಿತ್ಯ ಎಲ್ಲ ಕಡೆ ಕೈ ಹಾಕುತ್ತ ಮುಂದೆ ಸಾಗುತ್ತಿರುವ ಸುರೇಶ ಕಂಬಳಿಯವರು ಮಕ್ಕಳ ಸಾಹಿತ್ಯದತ್ತ ಹೆಚ್ಚು ಒಲವು ತೋರಲಿ. ಹಳೆಯ ಸರಕುಗಳ ಸುತ್ತವೇ ಗಿರಕಿ ಹೊಡೆಯುತ್ತ ಸೊರಗುತ್ತಿರುವ ಮಕ್ಕಳ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿ ಮಕ್ಕಳ ಕಣ್ಮಣಿ ಆಗಲಿ ಎಂದು ಆಶಿಸುವೆ.
Showing 2431 to 2460 of 5029 results