
Category: | ಕನ್ನಡ |
Sub Category: | ಕಾದಂಬರಿ |
Author: | ಚಂದ್ರಶೇಖರ ಮದಭಾವಿ | Chandrashekhar Madabhavi |
Publisher: | Chanda Pustaka |
Language: | |
Number of pages : | |
Publication Year: | 2025 |
Weight | |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮುರಿದ ಕಡಲಿನೊಳಗೆ ಈಜಲಾಗದ ಸಂಕಟ ================================ ಕಾದಂಬರಿ ಮಾಧ್ಯಮವು ಸಾಹಿತ್ಯಕ್ಕೆ ಪ್ರವೇಶ ಪಡೆದ ತಕ್ಷಣ ಏನು ಜನಪ್ರಿಯತೆ ಪಡೆಯಿತೋ ಅದನ್ನು ಈ ಗಳಿಗೆಯ ತನಕ ಮತ್ತೊಂದು ವಿಧದ ಬರವಣಿಗೆ ಪಡೆಯಲಿಲ್ಲ. ಇದು ಎಲ್ಲಾ ದೇಶಕಾಲಕ್ಕೂ ಸಲ್ಲುವ ಬರಹಲೋಕದ ವಿದ್ಯಮಾನ. ಬಹುಶಃ ನಮ್ಮ ಮನಸ್ಸುಗಳೊಳಗಿರುವ ವಿಸ್ತಾರವಾದ ಕಥೆಯ ಅಪೇಕ್ಷೆ ಇದಕ್ಕೆ ಕಾರಣವಾಗಿದ್ದಂತೆ, ಸಾಹಿತ್ಯದಲ್ಲಿ ಯಾವ ಜಟಿಲತೆಯನ್ನೂ ಬಯಸದೆ ಸರಾಗ ಮನರಂಜನಾತ್ಮಕ ಓದನ್ನು ಮಾತ್ರ ಅಪೇಕ್ಷಿಸುವ ಒಂದು ಓದುಗ ಸಮೂಹವೂ ಕಾರಣ. ಈ ಕಾರಣದಿಂದಲೆ ಇರಬಹುದು, ಜಗತ್ತಿನ ಬಹುತೇಕ ಭಾಷೆಗಳಲ್ಲಿ ವರ್ಷವರ್ಷವೂ ಹೊರಬರುವ ವಿಪುಲ ಸಂಖ್ಯೆಯ ಕಾದಂಬರಿಗಳು ವಸ್ತುವಿನ ಆಳವನ್ನು ಕೆದಕದೆ ತೇಲಿಸಿಕೊಂಡು ಹೋಗುವ ಗುಣವನ್ನು ಅರಿತೋ ಅರಿಯದೆಯೋ ಲಕ್ಷಣವನ್ನಾಗಿಸಿಕೊಂಡುಬಿಟ್ಟಿವೆ. ಈ ಲಕ್ಷಣವನ್ನೂ ಒಡೆಯುವ ಕಾಲ ಕಳೆದೆರಡು ದಶಕದಿಂದ ಜಗತ್ತಿನೆಲ್ಲೆಡೆ ಆರಂಭವಾಗಿದೆ. ಭಾರತದ ಭಾಷೆಗಳಲ್ಲೂ ಕೂಡ ಮಧ್ಯಮವರ್ಗದ ಕೌಟುಂಬಿಕ ಭಿತ್ತಿಯನ್ನೇ ಆಧರಿಸಿದ್ದ ಕಾದಂಬರಿಗಳು ಕ್ರಮಕ್ರಮೇಣ ಹಿನ್ನೆಲೆಗೆ ಸರಿಯುತ್ತಿವೆ. ಅಲ್ಲಿ ವಸ್ತುವೊಂದರ ಸಮಗ್ರ ಅಧ್ಯಯನದ ಫಲವಾಗಿ ಹೊರಹೊಮ್ಮುವ ಗಂಭೀರ ವಿಚಾರಗಳು ಮುಖ್ಯರಂಗಕ್ಕೆ ಬರುತ್ತಿವೆ. ಸಮಕಾಲೀನ, ಐತಿಹಾಸಿಕ ಅಥವಾ ಪೌರಾಣಿಕ ಈ ಯಾವ ವಸ್ತುವನ್ನೆತ್ತಿಕೊಂಡರೂ ಅಲ್ಲಿ ಭಾವುಕತೆ ಅತಿರಂಜಕತೆ ಭಾಷಾ ವೈಭವಗಳು ಪ್ರಧಾನವಾಗದೆ ವಿಚಾರಗಳ ಕುರಿತು ಸಮಗ್ರ ದೃಷ್ಟಿಕೋನವೊಂದು ನಾಯಕ ನಾಯಕಿಯರನ್ನು ಪಕ್ಕಕ್ಕೆ ಸರಿಸುವಷ್ಟು ಪ್ರಬಲವಾಗುತ್ತಿದೆ. ಇದಕ್ಕೆ ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳ ಕಾದಂಬರಿಗಳನ್ನು ಉದಾಹರಿಸಬಹುದು. ಪ್ರಸ್ತುತ ಕಾದಂಬರಿ ‘ಮುರಿದ ಕಡಲು’ ಕೂಡ ಈ ಉದಾಹರಣೆಗಳಲ್ಲಿ ಸೇರುತ್ತದೆ. ಮನೋಜ್ ರೂಪ್ಡಾ ಅವರ ಈ ಕಾದಂಬರಿಯು ತರೆದಿಡುವ ಲೋಕ ಬಹುಕಾಲ ನಮ್ಮ ಮನಸ್ಸನ್ನು ಅಶಾಂತಗೊಳಿಸುತ್ತದೆ. ಗಾಢ ದುಃಖವೊಂದು ಆವರಿಸಿ ಒಲ್ಲೆ ಎಂಬುವವರನ್ನೂ ಬಿಡದೆ ವಿಚಾರದಾಳಕ್ಕೆ ಎಳೆಯುತ್ತದೆ. ಮುರಿದ ದೋಣಿಯನ್ನು ಹೇಗೋ ದುರಸ್ತಿ ಮಾಡಬಹುದು. ಕಡಲೇ ಮುರಿದರೆ? ಚಂದ್ರಶೇಖರ ಮದಭಾವಿಯವರ ಕನ್ನಡ ಅನುವಾದವು ಎಲ್ಲಿಯೂ ತೊಡಕಿಗೆ ಸಿಕ್ಕಿಹಾಕಿಕೊಳ್ಳದೆ, ಮೂಲ ಕಾದಂಬರಿಕಾರರ ’ದನಿ’ಯನ್ನು ಕಿಂಚಿತ್ತೂ ಪಲ್ಲಟಿಸದೆ ಕಾದಂಬರಿಯನ್ನು ಓದುಗರಿಗೆ ಇತ್ತಿದೆ. ಇದು ಛಂದ ಪ್ರಕಾಶನದ ವಿಶೇಷತೆ. ಈ ಕಾದಂಬರಿಯ ನಾಯಕ ನಾಯಕಿ ಖಳ ಎಲ್ಲವೂ ಒಂದೇ! ಅದು ಮಾನುಷ ನೀಚತನ. ಯಾವತ್ತೂ ಮನುಷ್ಯ ಜಗತ್ತನ್ನು ಆಳಿರುವುದು ಸಜ್ಜನರಲ್ಲ, ತನ್ನ ಹಿತವನ್ನು ರಕ್ಷಿಸಿಕೊಳ್ಳುವ ಬಲಾಢ್ಯರ ಗುಂಪು. ಈ ಗುಂಪಿಗೆ ಸಮಷ್ಟಿಯ ಒಳಿತು ಕೆಡುಕು ವಿಷಯವಲ್ಲ. ಒಟ್ಟು ಸಮಾಜದ ಗತಿಯೇನು ಎಂಬ ಪ್ರಶ್ನೆಯನ್ನು ಅದು ಉತ್ತರಿಸುತ್ತ ಬಂದಿರುವುದು ಒಂದೇ ಒಂದು ವಾಕ್ಯದಿಂದ - ನಾನು ಉಳಿಯಬೇಕು, ಮತ್ತು ಯಾರು ಉಳಿಯುತ್ತಾರೋ ಅವರೇ ಸಮಾಜ! ಇಂತಹ ಮಾನುಷನೀಚತ್ವದ ಒಳಗನ್ನು ನೆಲ, ಕಾಡು, ನೀರು ಈ ಮೂರು ನೆಲೆಗಳಲ್ಲೂ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳುತ್ತ ಕಾದಂಬರಿಯು ಬಗೆಯುತ್ತದೆ. ಕೊನೆಗೆ ಉಳಿಯುವ ಸಂಕಟ - ತಮ್ಮ ಪಾಡಿಗೆ ಬದುಕುವ ಬಹುಜನರ ಗುಂಪು ಕೊನೆಗೂ ಒಂದು ಹಿಡಿ ನೀಚರ ಪ್ರತ್ಯಕ್ಷ ಯಾ ಪರೋಕ್ಷ ಅಧೀನದಲ್ಲೇ ಇದ್ದುಬಿಡುತ್ತದೆ ಎಂಬುದು. ಪ್ರತಿರೋಧವು ಹುಟ್ಟಿದಾಗಲೂ ಈ ಬಹುಜನರ ಗುಂಪು ತಮಗೊಳಿತು ಮಾಡಬಹುದಾದ ಪ್ರತಿರೋಧಕ್ಕೆ ಕೈಜೋಡಿಸದೆ ನೀಚರ ಪೋಷಣೆಗೆ ನಿಂತುಬಿಡುತ್ತದೆ ಎಂಬುದು. ನಿಜವಾದ ಮಾನುಷ ಚರಿತ್ರೆ ಇದೇ ಆಗಿದೆ. ಆ ಚರಿತ್ರೆಯನ್ನೇ ಈ ಕಾದಂಬರಿ ಪ್ರಸ್ತುತದ ಮಾವೋವಾದಿ ಸಶಸ್ತ್ರ ನಕ್ಸಲ್ ಕ್ರಾಂತಿ, ನಿಶ್ಶಬ್ದವಾಗಿ ಜಗತ್ತನ್ನು ಹೀರುತ್ತಿರುವ ಹಿಡಿಯಷ್ಟು ಕಾರ್ಪೊರೇಟ್ ಪಿಪಾಸಿಗಳ ಸಂಚು, ಎಂದೂ ಸ್ವಹಿತದ ಆಚೆಗೆ ಯೋಚಿಸದ ರಾಜಕೀಯ ಈ ಮೂರೂ ಭಿತ್ತಿಗಳಲ್ಲಿ ಚಿತ್ರಿಸುತ್ತದೆ. ಇವು ಮೂರೂ ಭಾರತದ ಸಮಸ್ಯೆಗಳಾಗಿರುವಾಗಲೇ ಇಡೀ ವಿಶ್ವದ್ದೂ ಆಗಿರುವ ಕಹಿಸತ್ಯವನ್ನು ಮೂರು ಒಡೆಯುವ ರೂಪಕಗಳ ಮೂಲಕ ತಣ್ಣಗೆ ವಿವರಿಸುವ ವಿವರಣೆಯು ಇಂತಹ ಓದಿಗೆ ತೆರೆದುಕೊಳ್ಳದಿರುವವರೊಳಗೆ ಹೊಟ್ಟೆತೊಳಸು ಉಂಟು ಮಾಡಿದರೆ ಅನಿರೀಕ್ಷಿತವಲ್ಲ. ಜೀವಂತ ಮನುಷ್ಯ, ಜೀವಂತ ಪ್ರಾಣಿ, ಜೀವಂತ ವಸ್ತುವನ್ನು ಜೀವವಿರುವಾಗಲೇ ಒಡೆದು ಛಿದ್ರಗೊಳಿಸಿ ಆನಂದಿಸುವ ಮನುಷ್ಯ ಮತ್ತು ಇದು ವಿನಾಶಕಾರಿಯೆಂದು ತಿಳಿದೂ ಮೌನವಾಗಿ ಬೆಂಬಲಿಸುವ ಗುಂಪು ಎರಡೂ ಎಂದೂ ಇರುತ್ತವೆ. ಇದೇ ಕಾದಂಬರಿ ಹೇಳುವ ಸತ್ಯ. ಪ್ರತಿರೋಧದ ಧ್ವನಿಗೆ ಸರ್ವವಿನಾಶದ ಕೊನೆಯಲ್ಲಿ ಚಮಚೆಯಷ್ಟು ಗೆಲುವು ದೊರೆಯಬಹುದಾದರೂ ಅದು ಶಾಶ್ವತವಲ್ಲ. -- ಲಲಿತಾ ಸಿದ್ಧಬಸವಯ್ಯ
ಚಂದ್ರಶೇಖರ ಮದಭಾವಿ | Chandrashekhar Madabhavi |
0 average based on 0 reviews.