nil
ಬಹುತೇಕ ಹಳ್ಳಿಗಳಲ್ಲಿ ಸುಗ್ಗಿಹಬ್ಬ ಮಾಡುತ್ತಾರೆ. ಹೊಸ ಬೆಳೆ ಮನೆಗೆ ಬಂದ ತಕ್ಷಣ, ಅದರಲ್ಲಿ ಮೊದಲ ಭಾಗವಾಗಿ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಧಾನ್ಯವನ್ನು ಊರ ದೇವರಿಗೆ ಎಲ್ಲರೂ ಅರ್ಪಿಸುತ್ತಾರೆ. ಬಡವ, ಬಲ್ಲಿದ, ಮೇಲು, ಕೀಳು ಇತ್ಯಾದಿಗಳ ಸೋಂಕಿಲ್ಲದೆ ಎಲ್ಲರೂ ಈ ದಾನ ಮಾಡುತ್ತಾರೆ. ಅವನ್ನೆಲ್ಲಾ ಸ್ವೀಕರಿಸಿದ ದೇವಸ್ಥಾನವು ಸುಗ್ಗಿಹಬ್ಬ ಹಮ್ಮಿಕೊಳ್ಳುತ್ತದೆ. ಊರವರೇ ನೀಡಿದ ಧಾನ್ಯಗಳನ್ನು ಬಳಸಿ ಊರವರೇ ಅಡಿಗೆ ತಯಾರಿಸಿ, ಎಲ್ಲರೂ ಊಟ ಮಾಡುತ್ತಾರೆ. ಈ ಊಟವು ಊರವರಿಗೆಲ್ಲಾ ಅತ್ಯಂತ ರುಚಿಯೆನ್ನಿಸುತ್ತದೆ.ಇಂತಹ ಸುಗ್ಗಿಹಬ್ಬದ ರುಚಿ ಈ ಕಥಾಸಂಕಲನಕ್ಕೆ ದಕ್ಕಿದೆ. ಕನ್ನಡ ಸಾಹಿತ್ಯಲೋಕದ ಸಾಕಷ್ಟು ಹೊಸ ಕತೆಗಾರರು ಮತ್ತು ಒಂದಿಷ್ಟು ಹಳಬರು ಈ ಸಂಕಲನಕ್ಕೆ ತಮ್ಮ ಕತೆಯನ್ನು ನೀಡಿದ್ದಾರೆ. ಸದ್ಯದ ಕನ್ನಡ ಲೋಕದ ಹೊಸ ಬರವಣಿಗೆಯ ಪಕ್ಷಿನೋಟವನ್ನು ಈ ಸಂಕಲನ ನೀಡುತ್ತದೆ. ಊರವರೆಲ್ಲರೂ ಒಂದಾದಾಗ ಮೂಡುವ ಸಹೃದಯತೆ, ಆತ್ಮೀಯತೆ ಮತ್ತು ಲವಲವಿಕೆಯೂ ಇಲ್ಲಿ ಕಾಣುತ್ತದೆ. ಇಂತಹ ಒಗ್ಗಟ್ಟಿನ ಕಾರ್ಯಗಳು ಸದ್ಯದ ಸಾಹಿತ್ಯದ ಲೋಕವನ್ನು ಜೀವಂತ ಉಳಿಸುವುದಕ್ಕೆ ಅವಶ್ಯ ಬೇಕಾದ ಲಸಿಕೆಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯ ಹಿರಿಯ ಮಹನೀಯರೆಲ್ಲರ ಪ್ರತಿಫಲನವೂ ಈ ಕತೆಗಳಲ್ಲಿ ಕಾಣುತ್ತದೆ. ಆ ನಿಟ್ಟಿನಿಂದ ಇದು ಪರಂಪರೆಯ ನೆಲದಲ್ಲಿ ಬೆಳೆದ ಹೊಸ ಬೆಳೆಯಾಗಿದೆ. ಊರ ದೇವಸ್ಥಾನವೂ ಒಂದಿಷ್ಟು ಹೊಲವನ್ನು ಹೊಂದಿದ್ದು, ಅದೂ ಕೊಯ್ದು ಮಾಡಿದ ಧಾನ್ಯದಲ್ಲಿ ಒಂದಿಷ್ಟು ಭಾಗವನ್ನು ಸುಗ್ಗಿಹಬ್ಬಕ್ಕೆ ದಾನ ಮಾಡುತ್ತದೆ. ಅದೇ ರೀತಿ ಈ ಸಂಕಲನವನ್ನು ಶ್ರದ್ಧೆಯಿಂದ ಸಂಪಾದಿಸಿದ ಅಜಿತ್ ಹರೀಶಿ ಮತ್ತು ವಿಠಲ್ ಶೆಣೈ ತಮ್ಮ ಕತೆಯನ್ನೂ ಇಲ್ಲಿ ಓದುಗರಿಗೆ ಕೊಟ್ಟಿದ್ದಾರೆ. ರುಚಿಯ ನಿರ್ಧಾರದಲ್ಲಿ ನಾಲಿಗೆಗಿಂತಲೂ ಮನಸ್ಸು ದೊಡ್ಡ ಪಾತ್ರವಹಿಸುತ್ತದೆ. ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ತಯಾರಿಸಿದ ಸುಗ್ಗಿಯೂಟ ರುಚಿಯಾಗಿರಲು ಮನಸ್ಸೇ ಮುಖ್ಯ ಕಾರಣ. ಆದರೆ ಪಕ್ಕದೂರಿನವರೂ ನಮ್ಮೂರಿನ ಸುಗ್ಗಿ ಊಟ ರುಚಿ ಎಂದರೆ ಆಗ ಆ ಪಾಕ ಮಹತ್ವ ಪಡೆದುಕೊಳ್ಳುತ್ತದೆ. ಅಂತಹ ದಾರಿಯಲ್ಲಿ ಇಲ್ಲಿನ ಹಲವು ಕತೆಗಳಿವೆ ಎನ್ನುವುದು ನನಗೆ ಭರವಸೆಯನ್ನು ಕೊಟ್ಟಿದೆ.
#
Showing 931 to 960 of 5246 results