#
ಯಾವ ವ್ಯಕ್ತಿಯನ್ನಾದರೂ ಸುಲಭಕ್ಕೆ ಅರ್ಥ ನ ಮಾಡಿಕೊಳ್ಳುವಷ್ಟು ಅವರ ಬದುಕು, ವಿಚಾರ ಮತ್ತು ಸಾಧನೆ ಸರಳವಾಗಿರುವುದಿಲ್ಲ. ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ಅವರು ಸಂಕೀರ್ಣವಾಗುತ್ತಾ, ಜಟಿಲವಾಗುತ್ತಾ ಹೋಗುವುದು ಸಹಜ ಕೆಲವೊಮ್ಮೆ ನಾವು ಯಾರನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಭಾವಿಸುತ್ತೇವೋ ಅವರೇ ನಮಗೆ ಸರಿಯಾಗಿ ಅರ್ಥವಾಗಿರುವುದಿಲ್ಲ. ಅದರಲ್ಲೂ ಅವರು ಮೇಲಮೇಲಕ್ಕೆ ಹೋದಂತೆಲ್ಲ ನಮ್ಮಿಂದ ದೂರವಾಗುತ್ತಾ ಹೋಗುತ್ತಾರೆ. ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಅವರು ಈ ಕೃತಿಯಲ್ಲಿ ಹಲವು ವ್ಯಕ್ತಿಗಳನ್ನು ನಮಗೆ ಪರಿಚಯಿಸುವ, ಆಪ್ತವಾಗಿಸುವ ಮತ್ತು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವುದರ ಜತೆಗೆ ಅವರ ಸಾಧನೆಯನ್ನು ನಮ್ಮ ಮುಂದೆ ಅಡಕಳ್ಳಿಯವರು ತೆರೆದಿಟ್ಟಿದ್ದಾರೆ. ಇಲ್ಲಿನ ಪ್ರತಿಯೊಬ್ಬರೂ ಅನ್ನ ವ್ಯಕ್ತಿತ್ವದವರು, ವಿಶೇಷ ಸಾಧನೆ ಮಾಡಿದವರು. ಅವರೆಲ್ಲರ ಸಾಧನೆ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಸ್ಫೂರ್ತಿಯ ಸೆಲೆ, ಪ್ರೇರಣಿಯ ಧಾರೆ. ಒಬ್ಬರನ್ನು ಪರಿಚಯಿಸಿಕೊಳ್ಳುವುದು ಮತ್ತು ಅವರ ಸಾಧನೆಯಿಂದ ಪ್ರೇರಿತರಾಗುವುದು ಯಾವತ್ತೂ ಒಂದು ದಿವ್ಯ ಅನುಭವವೇ. ಅಂಥ ಒಂದು ವಿಶೇಷ ಅನುಭವ ಈ ಕೃತಿಯನ್ನು ಓದಿದಾಗ ಆಗುತ್ತದೆ. ಅಡಹಳ್ಳಿಯವರ ಭಾಷೆ, ಶೈಲಿ, ಓಘ, ನಿರೂಪಣೆ ಅಪರೂಪವಾದುದು. ಅವರ ಬರಹಕ್ಕೆ ಸಹಜ ಓದಿನ ಗತಿ, ವೇಗವನ್ನು ಸಂಪಾದಿಸುವ ಕಥನಶಕ್ತಿ ಇದೆ. ವ್ಯಕ್ತಿಯನ್ನು ಪರಿಚಯಿಸುವ ಕಾಳಜಿ, ಆಪ್ತವಾಗಿಸುವ ಕಲೆಗಾರಿಕೆ ಅವರಿಗೆ ಸೊಗಸಾಗಿ ಸಿದ್ಧಿಸಿದೆ. ಅದಕ್ಕೆ ಈ ಕೃತಿಯೇ ನಿದರ್ಶನ ಒಬ್ಬರನ್ನು ಪರಿಚಯಿಸುವ ಏಕತಾನತೆ, ಧಾವಂತದಲ್ಲಿ ಅದು ಶುಷ್ಕ ಬಯೋಡೇಟಾ ಅಥವಾ ವ್ಯಕ್ತಿ ಕಿರ್ದಿಯಾಗದಂತೆ ಎಚ್ಚರವಹಿಸಿರುವುದು ಅವರ ಬರವಣಿಗೆಯ ಇನ್ನೊಂದು ವಿಶೇಷ. ಒಬ್ಬ ವ್ಯಕ್ತಿಯನ್ನು ನೋಡುವುದು, ಅವರ ಸಾಧನೆಯ ಬದುಕಿನಲ್ಲಿ ಅಂತರನೋಟ ಬೀರುವುದು ಹಾಗೂ ನಂತರ ಅವರ ಇಡೀ ವ್ಯಕ್ತಿತ್ವವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ಅತ್ಯಂತ ಹೊಣೆಗಾರಿಕೆಯ ನಡೆ. ಕಾರಣ ವ್ಯಕ್ತಿಗೆ, ಅವರ ವಿಚಾರ ಮತ್ತು ಸಾಧನೆಗೆ ಎಲ್ಲೂ ಅಪಚಾರವಾಗಬಾರದಲ್ಲ? ಈ ಕೃತಿಯಲ್ಲಿ ಅಂಥ ಒಂದು ವಿಶೇಷ ಪ್ರಯತ್ನವನ್ನು ಗಮನಿಸಬಹುದು. ಈ ಕೃತಿಯಲ್ಲಿನ ಒಬ್ಬೊಬ್ಬ ವ್ಯಕ್ತಿಯ ಕುರಿತು ಓದುತ್ತಾ ಹೋದಂತೆಲ್ಲ ನಮ್ಮೊಳಗೆ ಸ್ಫೂರ್ತಿಯ ಒಳಹರಿವು ಹೆಚ್ಚಾಗಿ, ಪ್ರೇರಣೆಯ ಅಣೆಕಟ್ಟು ಭರ್ತಿಯಾಗುತ್ತಾ ಹೋಗುತ್ತದೆ. ವಿಶ್ವೇಶ್ವರ ಭಟ್
nil
Showing 4921 to 4950 of 5217 results