ಅಕ್ಷರಸ್ಥರಲ್ಲದ ನಮ್ಮ ಹಳ್ಳಿಯ ಜನ, ಅದರಲ್ಲೂ ಹೆಣ್ಮಕ್ಕಳು ತಮ್ಮ ಬದುಕಿನ, ಕಷ್ಟಗಳ ಮಾತಾಡುವಾಗ "ಅಯ್ಯೋ ಕುಸ್ಮಾ, ನನ್ ಕತೆ ಬೆಳಗಾನ ಯೋಳುದ್ರೂ ಮುಗಿಯಲ್ಲ, ನೀ ಒಂದ್. ಬುಕ್ಕೇ ಬರ್ದ್ ಬುಡಬೋದು" ಅಂತಿರ್ತಾರೆ. ಅವರ ಪಾಲಿಗೆ ಕತೆಗಳೆಂದರೆ ಕಷ್ಟಗಳು. ಅಲ್ಲವೆನ್ನಲಾಗದು. ಅವರೊಳಗೆಲ್ಲಾ ಕತೆ ಇದೆ. ಕತೆ ಎಂಬುದು ಒಳಲೋಕ ಬಗೆದಾಗ ಕಾಣುವ ನೋಟ ಬದುಕು ಕೊಡುವ ಆಘಾತಗಳಿಂದ ಕಾಣುವ ಬೆಳಕನ್ನೂ, ಕಾಣೆಯನ್ನೂ ದೀಪವಾಗಿಸಿ ದಾಟಿಸಲು ಕಂಡುಕೊಂಡ ದಾರಿ. ಕತೆ, ನಮ್ಮನ್ನು ಈ ಜಗತ್ತಿನಲ್ಲಿರುತ್ತಲೇ, ಈ ಜಗತ್ತಿನಿಂದ ಕೆಲಹೊತ್ತಾದರೂ ಬೇರೆಡೆಗೆ ಒಯ್ಯುವ ಮಾಯಾಚಾಪೆ. ಒಂದು ದಿವೌಷಧ. ಕಲೆ ಮತ್ತು ಅಧ್ಯಾತ್ಮ ಎರಡೂ, ಮನುಷ್ಯರ ವೈಯಕ್ತಿಕ ಸಂಕಟಗಳನ್ನು ಲೋಕದ ಪ್ರಶ್ನೆಗಳಾಗಿಸುವ, ಉತ್ತರ ಹುಡುಕುವ, ಸಂಕಟಗಳನ್ನು ಸಾಂತ್ವನವಾಗಿಸುವ ಪ್ರಕ್ರಿಯೆಗಳು. ಅಂತಹ ಕತೆಗಳು ಎಲ್ಲರೊಳಗೂ ಇರುತ್ತವೆ. ಕೆಲವರು ಬರೆಯುತ್ತಾರಷ್ಟೇ!
ನಾಳೆಗಿದು ಇರದಿದ್ದರೆ ಹೇಗೆ ಎಂಬ ಆತಂಕಕ್ಕೂ, ಇದು ನಾಳೆಗೂ ಇರಬೇಕು ಎಂಬ ಆಶಯಕ್ಕೂ ಯಾವುದೇ ಅರ್ಥವಿಲ್ಲ. ಹಿಂದೆ ಎಷ್ಟೆಲ್ಲಾ ಆಗಿಹೋಗಿದೆ, ಕೂಡಿದೆ, ಕಳೆದಿದೆ, ನಾಶವಾಗಿದೆ, ಹುಟ್ಟಿದೆ. ಮುಂದೆಯೂ ಏನೆಲ್ಲಾ ಆಗಲಿಕ್ಕಿರಬಹುದು. ಅಖಂಡ ಕಾಲದ ಯಾವುದೋ ಬಿಂದುವಿನಲ್ಲಿ ನಿಂತಿದ್ದೇವೆ ನಾವು. ಆ ಬಿಂದು ಸಂಪೂರ್ಣ ಮುಗಿತಾಯಕ್ಕೆ ಎಷ್ಟು ಅಂತರದಲ್ಲಿದೆಯೋ ನಮಗೆ ಹೇಗೆ ಗೊತ್ತಾಗಬೇಕು ? ಇದು ಒಳ್ಳೆಯ ಕಾಲ ಅಂತ ನಿರ್ಧರಿಸುವ ಮಾನದಂಡ ಯಾವುದು ? ನಾವು ಬದುಕಿದ್ದವೆಂಬ ಕಾರಣಕ್ಕೆ ಅದು ಒಳ್ಳೆಯ ಕಾಲವೇ ? ಆಗಿರಬಹುದು, ಆಗಿಲ್ಲದಿರಬಹುದು. ಕಾಲಕ್ಕೆ ಒಳಿತು ಕೆಡುಕುಗಳೆಂಬುದಿದೆಯೇ ? ನಮ್ಮ ನೋಟ ಸಂಕುಚಿತ. ಕಾಲದ್ದು ಸಮಗ್ರ ನೋಟ. ನಮ್ಮ ಕಾಲಕ್ಕೆ ಬಹುದೊಡ್ಡ ಸಂಗತಿಯಾದದ್ದು ಕಾಲದ ಪಾಲಿಗೆ ಯಕಶ್ಚಿತ್ ಆಗಿರಬಹುದು. ನಮಗೆ ಪತ್ರಗಳ ಕಾಲದ ಕಾಯುವಿಕೆಯ ಭಾವುಕತೆಯೂ ಬೇಕು. ವಾಟ್ಸಪ್ ಗ್ರೂಪೂ ಬೇಕು. ಆದರೆ ಅವೆರಡೂ ಏಕಕಾಲದಲ್ಲಿ ಒಟ್ಟಿಗೇ ಇರಲಾರವು. ಛೇ ಪತ್ರವೆಷ್ಟು ಚೆಂದವಿತ್ತು ಎಂಬ ನೆನಪಿನೊಂದಿಗೇ ಅದನ್ನು ಗೌರವಯುತವಾಗಿ ಬೀಳ್ಕೊಟ್ಟು ಹೊಸ ರೂಪಾಂತರವನ್ನು ಸ್ವಾಗತಿಸಬೇಕು. ಅದು ಅನಿವಾರ್ಯ ಕೂಡ. ಆದರೂ ನಮಗೆ ಹಿಂದೆ ಚೆಂದವಿತ್ತು ಅನಿಸಬೇಕು. ಬದಲಿನ ನಿಯಮ, ಅನಿವಾರ್ಯತೆ ಎಲ್ಲದರ ಅರಿವಿದ್ದೂ ಹಿಂದೆ ಹೀಗಿತ್ತಲ್ಲಾ... ಎಂಬ ನೆನಪು ಮತ್ತು ಕಳೆದುಹೋಗುವಾಗಿನ ಕಳವಳ ಕಾಡಬೇಕು ಕಿಂಚಿತ್ತಾದರೂ. ಹಾಗೆ ಕಾಡಿದರೇನೇ ನಾವು ಮನುಷ್ಯರು!