Nil
ಮಲ್ಲಿಗೆಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಕುವೆಂಪು, ಬೇಂದ್ರೆ,ಕಾರಂತಜ್ಜರ ಬಣ್ಣಬಣ್ಣದ ಚಿತ್ರಗಳಿಂದ ಕೂಡಿದ್ದ ಶಾಲೆಯ ಗೋಡೆ, ಊರಿನ ಪರಿಸರ ಇವೆಲ್ಲಾ ಪುಸ್ತಕದ ಪುಟ ತಿರುಗಿಸುತಿದ್ದಂತೆ ಎಂಥವರನ್ನು ಕೂಡ ತಮ್ಮ ಬಾಲ್ಯಕ್ಕೆ ಮರಳಿ ಕರೆದೊಯ್ಯೋದರಲ್ಲಿ ಡೌಟೇ ಇಲ್ಲ.. ಅಷ್ಟು ಚೆಂದವಾಗಿ ಕಥೆಗೆ ಪೂರಕವಾಗಿ ಆಕರ್ಷ್ ಎಂ.ಆರ್ ಅವರು ಚಿತ್ರಗಳ ಬಿಡಿಸಿದ್ದಾರೆ. ತರಲೇ ಕಿತಾಪತಿ ತುಂಟಾಟಗಳಿಗೆ ಎತ್ತಿದ ಕೈ, ಓದುವುದರಲ್ಲೂ ಕೂಡ ಅಷ್ಟೇ ಫೇಮ್ಮಸ್ಸಾದ ಆರನೇ ತರಗತಿಯ ಐವರು ಮಕ್ಕಳು ಸೇರಿ ಒಂದು ತಂಡ ಕಟ್ಟಿಕೊಂಡು ಶಾಲೆಯ ಪ್ರತಿಭಾ ಕಾರಂಜಿಯಲ್ಲಿ ಸೋಲಾರ್ ಪ್ಯಾನೆಲ್ ತಯಾರಿಸಿ, ಗೆದ್ದು ಇಡೀ ಊರಿಗೆ ಮಾದರಿಯಾದ ಮಕ್ಕಳ ಸಾಹಸಮಯ ಎಳೆ ಹೊಂದಿರುವ ಕಾದಂಬರಿ ಮೂರರಿಂದ ಹನ್ನೆರಡನೇ ವಯಸ್ಸಿನ ಮಕ್ಕಳವರೆಗೂ ಒಂದೊಳ್ಳೆ ಕಥೆಯ ಜೊತೆಗೆ ಸೋಲಾರ್ ಪ್ಯಾನಲ್ ಹೇಗೆ ತಯಾರಿಸುತ್ತಾರೆ, ಅದರ ಕಾರ್ಯವೈಖರಿ ಹೇಗೆ? ಪ್ಯಾನಲ್ನ ಮುಖ್ಯ ಕೆಲಸವೇನು? ಈರುಳ್ಳಿ ಕತ್ತರಿಸಿದಾಗ ಕಣ್ಣಲ್ಲೇಕೆ ನೀರು ಬರುತ್ತೆ ಹೀಗೆ ವಿಜ್ಞಾನದ ಪಾಠವನ್ನು ತಿಳಿಸುತ್ತದೆ.
nil
ಲೇಖಕಿ ಅನುಸೂಯ ಯತೀಶ್ ಬಹಳ ಕಕ್ಕುಲತೆಯ ಹೆಣ್ಣು ಮಗಳು ಮತ್ತು ಬಹಳ ಜವಾಬ್ದಾರಿಯುತ ಶಿಕ್ಷಕಿ ಹಾಗೂ ಗೃಹಿಣಿ. ಅವರ ತಾಯಿಯಂತಹ ಅಂತಃಕರಣಕ್ಕೆ ಅವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಮತ್ತು ಅವರು ಕಲಿಸುತ್ತಿರುವ ಶಾಲೆಯ ಮಕ್ಕಳು ಇಬ್ಬರೂ ಸಮಾನ ಹಕ್ಕುದಾರರು. ಶಿಕ್ಷಕಿ ಯಾರು, ತಾಯಿ ಯಾರು ಎಂದು ಗೆರೆ ಎಳೆಯಲಾಗದಷ್ಟು ಮಮತೆಯ ಜೀವ ಅವರದು. ಅವರು ಕಲಿಸುವ ಶಾಲೆಯ ಮಕ್ಕಳ ಜೊತೆಗಿನ ಒಡನಾಟವನ್ನು ಒಮ್ಮೊಮ್ಮೆ ನನ್ನಲ್ಲಿ ಹಂಚಿಕೊಳ್ಳುತ್ತಿದ್ದರು. ಅದನ್ನು ಕೇಳಿದ ನನಗೆ ಈ ಟೀಚರೊಳಗಿನ ತಾಯಿ ಜೀವದ ಪರಿಚಯವಾಗಿತ್ತು. ಈ ಅನುಪಮವಾದ ಅನುಭವ ಶಾಲೆಯನ್ನು ಬರಿಯ ಮಾತಲ್ಲಿ ಮುಗಿಸಬೇಡಿ. ಸರಣಿಯ ರೂಪದಲ್ಲಿ ಬರೆಯಿರಿ ಎಂದು ಕುಮ್ಮಕ್ಕು ನೀಡಿದ್ದೆ. ಆಗ ನಮ್ಮ `ಕೆಂಡಸಂಪಿಗೆ' ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ನನಗೇ ಅಚ್ಚರಿಯಾಗುವಂತೆ ಬಹಳ ಮನೋಜ್ಞವಾಗಿ ಬರೆದೇ ಬಿಟ್ಟರು. ಇವರ ಈ ಬರಹ ನನಗೇನೂ ಆಶ್ಚರ್ಯ ಉಂಟು ಮಾಡಲಿಲ್ಲ. ಏಕೆಂದರೆ ಪಕ್ಕಾ ತಾಯಿ ಹೃದಯದ ಅನುಸೂಯರಂತಹ ಬರಹಗಾರ್ತಿಯೊಬ್ಬಳು ರೂಢಿಗತವಾದ ಸಿದ್ಧಮಾದರಿಯ ಅಕಾಡೆಮಿಕ್ ನಡೆಗಳನ್ನು ಕಿತ್ತು ಬಿಸಾಕಿ ಅಂತಃಕರಣದ ಅನುಭವ ಜನ್ಯವಾದ ಗದ್ಯವನ್ನು ಬರೆದರೆ ಅದು ಹೃದಯ ಸ್ಪರ್ಶಿಯ ಅಮೂಲ್ಯವೂ ಆಗಬಲ್ಲದೆಂದು ನನಗೆ ಗೊತ್ತಿತ್ತು. ಒಂದು ಲಕ್ಷಕ್ಕೆ ಎಷ್ಟು ಸೊನ್ನೆಗಳು ಎಂಬ ಊಹೆಯಿಲ್ಲದ ಬಾಲಕಿಯೊಬ್ಬಳು ಕಪ್ಪು ಹಲಗೆಯ ತುಂಬಾ ಸಾವಿರಗಟ್ಟಲೆ ಸೊನ್ನೆಗಳನ್ನು ತುಂಬುವುದರಿಂದ ಹಿಡಿದು ಮಂಜುನಾಥ ಎಂಬ ಹೂ ಹೃದಯದ ಬಾಲಕನ ಕಥಾನಕದವರೆಗಿನ ವಿವರಗಳು ಈ ಅನುಸೂಯ ಎಂಬ ಹೆಣ್ಣು ಮಗಳು ಮುಂದೊಂದು ದಿನ ಕನ್ನಡದ ಶಕ್ತ ಗದ್ಯಗಾರ್ತಿಯಾಗಬಲ್ಲಳು ಎಂಬುದನ್ನು ಸೂಚ್ಯವಾಗಿ ಹೇಳುತ್ತಿದೆ. ಅನುಸೂಯ ಅವರಿಗೆ ಅಭಿನಂದನೆಗಳು.