ಸಂಜಯ ಈ ಕಾಲದ ಯುವ ಕತೆಗಾರ, ಆತನ ಕಥನ ಶಕ್ತಿ ಬಗ್ಗೆ ಯಾವುದೇ ಅನುಮಾನ ಬೇಡ. ಈಗಾಗಲೇ ಅವನ ಕತೆಗಳು ವಿದ್ಯಾರ್ಥಿ ಕಥಾ ಪ್ರಶಸ್ತಿಗಳನ್ನು ಪಡೆದಿವೆ. ಸಿದ್ದ ಸೂತ್ರಗಳನ್ನು ಯಾವ ಮುಲಾಜಿಲ್ಲದೆ ಸೈಡಿಗೆ ತಳ್ಳಿ, ತನ್ನದೇ ಭಾಷೆ ಮತ್ತು ನರೇಷನ್ ಮೂಲಕ ಹೊಸ ಕತೆ ಅಲ್ಲದಿದ್ದರೂ ಹೊಸತನ ಕೂಡಿರುವ ಕತೆಗಳನ್ನು ಕಟ್ಟಿದ್ದಾನೆ. ತನ್ನ ಜೀವನಾನುಭವಕ್ಕೆ ಎಟುಕಿದಷ್ಟು ಭಾಷೆಯನ್ನು ಅತಿ ನಾಜೂಕಾಗಿ, ಅಷ್ಟೇ ಚುರುಕಾಗಿಯೂ ಬಳಸಿದ್ದಾನೆ. 'ದ್ಯಾಮಜ್ಜಿ ಪುರಾಣ' 'ಗುಲ್ಕಮ್ಮ' 'ನೀರಿಲ್ಲದ ನದಿಯ ಊರಿಂದ ನಡೆದು ಬಂದವರು' 'ಕಲರ್ ಕಲರ್ ಬಲೂನ್' 'ಉದ್ಭವ ಸೇತುವೆ' ಕತೆಗಳಲ್ಲಿ ಸ್ಪಷ್ಟವಾಗಿ ನೇರವಾಗಿ ಎಲ್ಲ ಕಾಲಕ್ಕೂ ಸಲ್ಲುವ ಕಥೆಗಾರನಾಗಿ ಸಂಜಯ್ ಕಾಣಿಸಿಕೊಳ್ಳುತ್ತಾನೆ. ಸಂಜಯನ ಎಷ್ಟೋ ಕತೆಗಳು ಪದಮಿತಿಗೆ, ಡೆಡ್ ಲೈನ್ ಇಟ್ಟುಕೊಂಡು ಸ್ಪರ್ಧೆಗಾಗಿ ಬರೆದ ಕತೆಗಳೇ ಆಗಿವೆ. ಹಾಗಾಗಿ ಕೆಲವು ಮಾದರಿಗೆ, ಇಂತಹ ಪತ್ರಿಕೆಗಳಿಗೆ ಇಂಥ ಕಥಾವಸ್ತು ಇದ್ರೆ ಗೆಲ್ಲುವುದು ಎಂಬ ಸಹಜ ಆಸೆಯಿಂದ ಕಟ್ಟಿದ ಕತೆಗಳು. ಅವು ಕೂಡ ಕೆಲವೊಂದು ಸಲ ಸಂಜಯನ ಅಸೆಯನ್ನು ಮಣಿಸಿ ಅವನೊಳಗಿನ ಕತೆಗಾರನ್ನು ಗೆಲ್ಲಿಸಿವೆ. ಹಾಗಾಗಿ ಕತೆಗಳು ಗೆದ್ದಿವೆ..! ಜಯರಾಮಚಾರಿ ಮುನ್ನುಡಿಯಿಂದ