nil
ಭಾರತದ ಅರಸುಗಳಲ್ಲಿ ಶ್ರೀಕೃಷ್ಣದೇವರಾಯನಿಗೆ ವಿಶಿಷ್ಟವಾದ ಸ್ಥಾನವಿದೆ. ಸಮರ್ಥ ಆಡಳಿತಗಾರ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ; ಕಲೆ,ಸಾಹಿತ್ಯ ರಂಗಗಳ ಪೋಷಕ; ತಾನು ವೈಷ್ಣವ ಧರ್ಮವನ್ನು ಅನುಸರಿಸಿದರೂ ಇತರ ಧರ್ಮಗಳ ಬಗ್ಗೆ ಒಬ್ಬ ರಾಜ ನಡೆದುಕೊಳ್ಳುವ ರೀತಿಯಲ್ಲಿ ನಡೆದುಕೊಂಡ ಸಂಯಮಿ. ತನ್ನನ್ನು ಕನ್ನಡ ರಾಯನೆಂದು ಕರೆಸಿಕೊಂಡ ಭಾಷಾಪ್ರೇಮಿ. ಯವನ ರಾಜ್ಯ ಸ್ಥಾಪಕನೆಂಬ ಬಿರುದನ್ನು ಪಡೆದ ರಣಧೀರ. ಬಹುಶಃ ಈತನ ಬಗ್ಗೆ ಪ್ರಚಲಿತದಲ್ಲಿರುವಷ್ಟು ದಂತಕಥೆಗಳು ಬೇರಾವ ರಾಜನ ಬಗ್ಗೆಯೂ ಇಲ್ಲ. ಹೀಗೆ ಇಂದಿಗೂ ಜನಮಾನಸದಲ್ಲಿ ನೆಲಸಿರುವ ವರ್ಣರಂಜಿತ ಐತಿಹಾಸಿಕ ವ್ಯಕ್ತಿ ಶ್ರೀಕೃಷ್ಣದೇವರಾಯ. ಈ ಕಾದಂಬರಿಯಲ್ಲಿ ಮಿತ್ರ ಶ್ರೀ ಸು.ರುದ್ರಮೂರ್ತಿಶಾಸ್ತ್ರಿ ಶ್ರೀಕೃಷ್ಣದೇವರಾಯನ ಚರಿತ್ರೆಯನ್ನು ನಿರೂಪಿಸುವುದಕ್ಕಿಂತಲೂ ಆತನ ಚಾರಿತ್ರ್ಯವನ್ನು ನಿರೂಪಿಸುವುದರತ್ತ ಹೆಚ್ಚು ಗಮನಹರಿಸಿದ್ದಾರೆ. ಶ್ರೀಕೃಷ್ಣದೇವರಾಯ ಈ ಕಾದಂಬರಿಯ ಪ್ರಧಾನ ಪಾತ್ರ. ಆದರೆ ಎಲ್ಲ ಪಾತ್ರಗಳ ಒಳಹೊರ ಚಾರಿತ್ರ್ಯಗಳನ್ನು ಗಮನಿಸಿ ಎಲ್ಲ ಪಾತ್ರಗಳನ್ನೂ ನಮ್ಮ ಮುಂದಿರಿಸಿದ್ದಾರೆ. ಬಹುಶಃ ಈ ಕಾರಣದಿಂದ ಶ್ರೀಕೃಷ್ಣದೇವರಾಯನ ಬದುಕಿನ ಸುತ್ತ ಹೆಣೆದುಕೊಂಡಿರುವ ಹಲವಾರು ಅಸಂಗತಗಳು ತಮ್ಮಷ್ಟಕ್ಕೆ ತಾವೇ ಕಳಚಿಕೊಂಡಿವೆ. ಆ ಕಾಲದ ಆಂತರಂಗಿಕ ಗೂಢಚರ್ಯೆ, ಅಧಿಕಾರ ದಾಹದ ಪಿತೂರಿಗಳು, ಉಪಾಯಗಳಿಗೆ ಪ್ರತ್ಯುಪಾಯಗಳು ಮುಂತಾದ ಕುತೂಹಲ ಮೂಡಿಸುವ ಪ್ರಸಂಗಗಳೂ ಹಿತವಾಗಿ ಮೂಡಿಬಂದಿವೆ. ಇವೆಲ್ಲವೂ ಆ ಪಾತ್ರಗಳ ವ್ಯಕ್ತಿತ್ವವನ್ನು ಆವಿಷ್ಕರಿಸುವಲ್ಲಿ ಸಹಕಾರಿಯಾಗಿವೆ.
#
Showing 4261 to 4290 of 5029 results