ಪ್ರಸನ್ನ ಅವರ ಪ್ರಮುಖ ಕಾಳಜಿ ಮನುಷ್ಯ ಭಿನ್ನ-ಭಿನ್ನ ಕಾಲಗಳಲ್ಲಿ ಹಿಮ ಸನ್ನಿವೇಶಗಳಲ್ಲಿ ಹೇಗೆ ಮತ್ತು ಎಷ್ಟು ಭಿನ್ನವಾಗಿ ನಡೆದುಕೊಳ್ಳುತ್ತಾನೆ ಎನ್ನುವುದನ್ನು ಅನ್ವೇಷಿಸುವುದು ಆಗಿದೆ. ಈ ಅನ್ವೇಷಣೆ ಸಾಧಾರಣವಾಗಿ ಮಧ್ಯಮ ವರ್ಗದ ಬದುಕಿನ ವ್ಯವಸ್ಥೆಯಲ್ಲಿ ಸಿಲುಕಿರುವ ಜನಗಳ ಮನೋಭಾವದ ಅನ್ವೇಷಣೆಯೇ ಆಗಿದೆ. ಈ ಗುಂಪಿನಲ್ಲಿ ಸರ್ಕಾರಿ ಮತ್ತು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡವರು. ನಿವೃತ್ತರು, ರಾಜಿನಾಮೆ ಕೊಟ್ಟವರು ಮುಂತಾದವರೆಲ್ಲ ಇದ್ದಾರೆ. ಅವರು ಇರುವುದು ತಮ್ಮ ತಮ್ಮ ದೌರ್ಬಲ್ಯಗಳ ಪ್ರತೀಕಗಳಾಗಿಯೇ ಹೌದು. ದೌರ್ಬಲ್ಯಗಳನ್ನು ಎದುರುಗೊಳ್ಳುವ, ಅದನ್ನು ನಿರ್ವಿಣ್ಣರಾಗಿ ಒಪ್ಪಿಕೊಳ್ಳುವ, ಎದುರಿಸುವ ಎಲ್ಲ ಬಗೆಯ ಜನಗಳನ್ನು ನಾವು ಈ ಕಥೆಗಳಲ್ಲಿ ಮುಖಾಮುಖಿಯಾಗುತ್ತೇವೆ.