nil
ಕಾವ್ಯದಂತೆ, ಸಣ್ಣಕಥೆಯಲ್ಲೂ ಲಕ್ಷಣರಾವ್ ಸದ್ಯ ಬಂಡಾಯಗಳ ಹಣೆಪಟ್ಟಿಗೆ ದಕ್ಕುವವರಲ್ಲ, ನವ್ಯದ ಅಂತರ್ಮುಖಿಕೆ, ಅಂತಃಪ್ರಶ್ನೆ, ಪ್ರಜ್ಞಾಪ್ರವಾಹತಂತ್ರ ಇದೇ ಮೊದಲಾದವು ಇವರ ಕಥೆಗಳಲ್ಲಿ ಕಾಣುವುದಿಲ್ಲ ಸಾಮಾಜಿಕ ಕಳಕಳಿಗಿಂತ ಭಿನ್ನ, ಅಂದರೆ ಸಾಮಾಜಿಕ ಸಮಸ್ಯೆಗಳಿಂದ ವಿಮುಖರು ಎಂದಲ್ಲ, ಸಾಮಾಜಿಕ ಸಮಸ್ಯೆಗಳು, ಕ್ರೂರ ವ್ಯವಸ್ಥೆ ಇವುಗಳ ಒತ್ತಡದಲ್ಲಿ, ದಮನಕಾರಿ ನಿಲುವುಗಳಲ್ಲಿ ಮನುಷ್ಯ ಸಂಬಂಧಗಳು, ಪ್ರೀತಿ ವಿಶ್ವಾಸಗಳು ಹೇಗೆ ನಲುಗಿಹೋಗುತ್ತಿವೆ ಎಂಬುದು ಲಕ್ಷಣರಾವ್ ಅವರ ಸೃಜನಶೀಲ ಮನಸ್ಸಿನ ಮುಖ್ಯ ಕಾಳಜಿಯಾಗಿದೆ. ಪ್ರೀತಿ, ಗಂಡು-ಹೆಣ್ಣಿನ ಪ್ರೀತಿ, ಜೀವನಪ್ರೀತಿ - ಇವು ವ್ಯವಸ್ಥೆಯ ಕ್ರೂರ ಹಿಡಿತದಲ್ಲಿ ನಲುಗಬಾರದು. ನಿಷೇಧ ಮೊದಲಾದ ನಕಾರಾತ್ಮಕ ಪ್ರವೃತ್ತಿಗಳಲ್ಲಿ ಪ್ರೀತಿ ಮುರುಟಿಹೋಗಬಾರದು ಎಂಬ ಆರೋಗ್ಯಕರ ಜೀವನದೃಷ್ಟಿ ಲಕ್ಷಣರಾವ್ ಅವರ ಕಥೆಗಳ ಹಿಂದಿನ ಮುಖ್ಯ ಮಾನವೀಯ ದನಿಯಾಗಿದೆ. ಲಕ್ಷಣರೊಳಗಿನ ಕವಿಯ ಆರೋಗ್ಯಕರ ಜೀವನದೃಷ್ಟಿ, ಸ್ಪಷ್ಟ ವಿಚಾರಗಳ ಜೊತೆಗೆ ಅವರ ಗದ್ಯವು ವಾಚ್ಯವಾಗದೆ ಧ್ವನಿಪೂರ್ಣವಾಗಿ ಕಾವ್ಯಕ್ಕೆ ಹತ್ತಿರವಾಗುತ್ತದೆ. ಜಿ.ಎಸ್.ಆಮೂರರು ಹೇಳಿರುವಂತೆ ಪ್ರಾಮಾಣಿಕತೆ, ತೀವ್ರತೆ ಮತ್ತು ಹೊಸದೃಷ್ಟಿ ಲಕ್ಷಣರಾವ್ ಅವರ ಕಾವ್ಯದ ಮುಖ್ಯ ಗುಣಗಳಾಗಿರುವಂತೆ ಕಥೆಗಳ ಮುಖ್ಯ ಗುಣವೂ ಆಗಿದೆ: ಶಕ್ತಿಯೂ ಆಗಿದೆ.