ಕ್ಷಯ
SYNOPSIS
‘ಕ್ಷಯ’ ಕಾದಂಬರಿಯು ಗಾತ್ರದಲ್ಲಿ ಚಿಕ್ಕದಿದ್ದರೂ (…ಪುಟಗಳು)
ಅಚ್ಚರಿಪಡುವಷ್ಟು ಸಾಂದ್ರವಾದ ಹಾಗೂ ಅಷ್ಟೇ ವಿಸ್ಮತವಾದ ಜಗತ್ತೊಂದು ಅದರೊಳಗಿದೆ. ಹೊನ್ನಾವರ ಹತ್ತಿರದ, ಕರಾವಳಿಯ ಒಂದು ಚಿಕ್ಕ ಹಳ್ಳಿಯ ಪರಿಸರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಕಾದಂಬರಿಯ ಕಥಾಜಗತ್ತಿನಲ್ಲಿ ಸುಮಾರು 25ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಆದರೆ ಪಾತ್ರ ಚಿಕ್ಕದಿರಲಿ – ದೊಡ್ಡದಿರಲಿ ಮೂಲ ಕಥಾವಸ್ತುವಿನೊಂದಿಗೆ ನ್ಯಾಯಯುತ ಸಾವಯವ ಸಂಬಂಧವನ್ನು ಹೊಂದಿರುವುದು ಕಾದಂಬರಿಯ ಬಂಧದ ಒಂದು ವಿಶೇಷ. ಆದರೆ, ಯಾವ ಪಾತ್ರವೂ ಇಲ್ಲಿ ನಾಯಕ ಅಥವಾ ನಾಯಕಿ ಆಗದೇ, ಕಾದಂಬರಿಯ ಮೂಲವಸ್ತು ಸಮಸ್ಯೆ ಕ್ಷಯವೇ ಪ್ರಾಧಾನ್ಯತೆ ಪಡೆದುಕೊಂಡಿರುವುದು ಇನ್ನೊಂದು ವಿಶೇಷ. ಕಾದಂಬರಿ ತೆರೆದುಕೊಳ್ಳುವುದೇ ಕ್ಷಯಕ್ಕೆ ತುತ್ತಾಗಿರುವ ಅಥವಾ ಹಾಗಂದುಕೊಂಡಿರುವ ಶ್ರೀನಿವಾಸ ನಾಯ್ಕ – ತನ್ನ ಆಪ್ತ ಗೆಳೆಯ ಶಂಭುಗೌಡ ಸೂಚಿಸಿರುವ ಔಷಧಿಗಾಗಿ ಬೇರುಗಳನ್ನು ಹುಡುಕುವ ಚಿತ್ರದೊಂದಿಗೆ, ಆ ಚಿತ್ರ ಎಷ್ಟೊಂದು ಸಮರ್ಥವಾಗಿ ಮೂಡಿ ಬಂದಿದೆಯೆಂದರೆ, ಕ್ಷಯ ಪೀಡಿತ ಮನುಷ್ಯನ ದೈಹಿಕ-ಮಾನಸಿಕ ಸ್ಥಿತಿಯನ್ನು ತಿಳಿಸುತ್ತಲೇ, ಅವನ ಕೆಮ್ಮು-ಕಫದ ಉಗುಳು ಮಣ್ಣಿನ ಮೇಲೆ ಬಿದ್ದು ಅಲ್ಲಿ ನಡೆಯುವ ಒಂದು ಸಣ್ಣ ಪ್ರಕೃತಿ ಸಹಜ ಜೀವವ್ಯಾಪಾರವು ತುಂಬ ವಾಸ್ತವಿಕವಾಗಿ ಚಿತ್ರಿತವಾಗುತ್ತ ಹೋಗುತ್ತದೆ.
ಇಡೀ ಕಾದಂಬರಿಯನ್ನು ಓದಿದಾಗ ಓದುಗನಿಗೆ ಒಂದು ದಟ್ಟ ಅನಿಸಿಕೆ ಮೂಡುತ್ತದೆ. ಕ್ಷಯ ಕೇವಲ ಶ್ರೀನಿವಾಸ ನಾಯ್ಕನಿಗೆ ಮಾತ್ರ ಅಂಟಿದ ರೋಗವಲ್ಲ. ಶ್ರೀನಿವಾಸ ನಾಯ್ಕನಿಗೆ ಅಂಟಿರುವುದು ಕೇವಲ ದೈಹಿಕ ಕ್ಷಯ. ಆದರೆ ಇಡೀ ಊರಿಗೆ ಊರೇ ಕ್ಷಯಕ್ಕೆ ತುತ್ತಾಗಿದೆ. ಆದರೆ ಇದು ದೇಹ ಮಟ್ಟದ ಕ್ಷಯವಲ್ಲ; ಆ ಪುಟ್ಟ ಹಳ್ಳಿಯ ಅನೇಕರ ಮನಸ್ಸಿನಲ್ಲಿ ಕುಳಿತು ಅವರಿಗೇ ಗೊತ್ತಾಗದಂತೆ ಅವರನ್ನುಕೊಳೆಯಿಸುತ್ತಿರುವ ರೋಗ ಮನೋಮಟ್ಟದ ರೋಗ, ಹೊಸಬಯ್ಯ ನಾಯ್ಕನ ಮಗಳ ಮರಣದ ಹಿಂದಿನ ಕಾರಣಗಳ ಎಳೆಗಳು, ಅಳ್ಳಂಕಿ ವೆಂಕಟನಾಯ್ಕರ ದಾಂಪತ್ಯದ ಸ್ವರೂಪ, ಶ್ರೀನಿವಾಸ ನಾಯ್ಕನ ಮಗ ಸುರೇಶನ ಮನೋರೋಗ, ಹುಕ್ಕಿ ಹನುಮಂತನ ಹೆಂಡತಿ ಬಸರಾಗುವ ರೀತಿ ಇತ್ಯಾದಿಗಳನ್ನು ಮನನ ಮಾಡುತ್ತಾ ಹೋದರೆ ಈ ಅಂಶ ಮನದಟ್ಟಾಗುತ್ತದೆ.
ಕಾದಂಬರಿಯಲ್ಲಿ ಗಮನ ಸೆಳೆಯುವ ಹಾಗೂ ಆಪ್ತವಾಗುವ ಇನ್ನೊಂದು ಅಂಶವೆಂದರೆ ವಾಸುದೇವರ ಭಾಷೆ, ಉತ್ತರ ಕನ್ನಡದ ಹೊನ್ನಾವರ ಸುತ್ತಮುತ್ತಲಿನಲ್ಲಿ ಇರುವ ಕನ್ನಡ ಭಾಷೆಯು, ಸುಂದರವಾದ ಆದರೆ ಅದು ಅತೀ ಪ್ರಾದೇಶಿಕತೆಯ ಸೆಳವಿಗೆ ತುತ್ತಾಗದೇ ಕರ್ನಾಟಕದ ಉಳಿದ ಭಾಗಗಳಲ್ಲೂ ತನ್ನ ಸಂವಹನ ಶಕ್ತಿಯನ್ನು ಉಳಿಸಿಕೊಂಡಿರುವ ಚಿತ್ರಕಶಕ್ತಿಯ ಭಾಷೆಯನ್ನು ಕಾದಂಬರಿಯ ತುಂಬೆಲ್ಲ ಕಾಣಬಹುದು.
ABOUT AUTHOR
Opinion of Others
There are no others opinion yet.
Reviews
There are no reviews yet.