ಗೌಡ ಪರಂಪರೆ
₹ 255
SYNOPSIS
ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಸಮುದಾಯ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕಿನ ವಿಟ್ಲ, ಪಾಣೆ ಮಂಗಳೂರು ಹಾಗೂ ಕೊಡಗಿನಲ್ಲಿ ಬಹುಸಂಖ್ಯಾತರಾಗಿ, ಸಾಕಷ್ಟು ಭೂ ಹಿಡುವಳಿ ಹೊಂದಿ ಜೀವಿಸುತ್ತಬಂದಿದ್ದಾರೆ.ಇವರು ಮೂಲತಃ ಕೃಷಿಕರು. ಆದರೆ ಈ ಸಮುದಾಯದ ಬೇರುಗಳನ್ನು ಹುಡುಕುತ್ತಾ ಹೋದರೆ ಇವರ ಮೂಲವನ್ನು ಸುಮಾರು ಸಾವಿರದ ಐದುನೂರು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಇವರ ಮೂಲದ ಬಗ್ಗೆ ಅನೇಕ ಚರ್ಚೆ, ವಾದಗಳಿದ್ದರೂ ಪ್ರಸ್ತುತ ಕೃತಿಯಲ್ಲಿ ಈ ಸಮುದಾಯದ ಮೂಲವನ್ನು ಗಂಗವಂಶದಲ್ಲಿಗುರುತಿಸಲಾಗಿದೆ.
ಕಾಲಗರ್ಭದಲ್ಲಿ ಅಡಗಿರುವ, ಸಾಂಕೇತಿಕ ರೂಪದಲ್ಲಿರುವ, ಒಂದು ಸಮುದಾಯದ ಮೂಲ ಚರಿತ್ರೆ, ಸಂಸ್ಕೃತಿ, ಪರಂಪರೆಯನ್ನು ಉತ್ಪನನ ಮಾಡುತ್ತ, ಈಗಿರುವ ಸಂಗತಿಗಳೊಂದಿಗೆ ತಳುಕು ಹಾಕುತ್ತ ಸಂಶೋಧನಾತ್ಮಕವಾಗಿ ನಿರೂಪಿತವಾಗಿರುವ ಈ ಕೃತಿ ಸಂಸ್ಕೃತಿ ಅಧ್ಯಯನದ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಸತ್ಯಾನ್ವೇಷಣೆಯೇ ಮೂಲಧಾತುವಾಗಿರುವ ಇಲ್ಲಿನ ಬರೆವಣಿಗೆ ಹೊಸ ಹೊಸ ಅಂಶಗಳನ್ನು ತುಂಬಿಕೊಂಡಿದ್ದು, ಕುತೂಹಲಕಾರಿಯಾಗಿದ್ದು, ಚರಿತ್ರೆ ಪ್ರಿಯರನ್ನೂ ಸಂಸ್ಕೃತಿ ಪ್ರಿಯರನ್ನೂ ಏಕಕಾಲಕ್ಕೆ ಆಕರ್ಷಿಸುತ್ತದೆ.
ABOUT AUTHOR
Opinion of Others
Customer Reviews
4 reviews for ಗೌಡ ಪರಂಪರೆ
-
Proud to be part of Veeraloka Family.
-
Thanks are due to Veeraloka Books Pvt. Ltd.
-
Super
-
❤️
Harish Peraje–
ಪುತ್ತೂರು ಅನಂತರಾಜ ಗೌಡ ಅವರು ಬರೆದಿರುವ ಗೌಡ ಪರಂಪರೆ 10 ಕುಟುಂಬ 18 ಗೋತ್ರ. ಪುಸ್ತಕ ಈಗ ತಾನೇ ಬೆಂಗಳೂರು ವೀರ ಲೋಕ ಪುಸ್ತಕ ಪ್ರಕಾಶಕರು ನನಗೆ ಪೋಸ್ಟ್ ಮುಖಾಂತರ ತಲುಪಿಸಿದ ಕೃತಿ ಕೈ ಸೇರಿದೆ. ಮೊದಲೇ ಫೋನ್ ಫೇ ಮಾಡಿದ್ದೆ. ಪುತ್ತೂರು ಅನಂತರಾಜ ಗೌಡ ಅವರು ಒಂದು ಪುಸ್ತಕ ರಚಿಸಬೇಕಾದರೆ ಸಾಕಷ್ಟು ಇತಿಹಾಸದ ಪುಟವನ್ನು ಕೆಣಕುತ್ತಾರೆ, ಅನುಭವವಿರುವ ಖ್ಯಾತ ಸಂಶೋಧಕರ ಬಾಗಿಲು ಬಡಿಯುತ್ತಾರೆ, ಶಿಲೆ, ಶಾಸನ, ಮಠ,ತಾಳೆಗರಿ ದಾಖಲೆಗಳ ಧೂಳ್ ಒರಸುತ್ತಾರೆ. ಇದೇ ಲೇಖಕರ ಶ್ರಮ ಅಷ್ಟೊಂದು ಮಹತ್ವಪಡೆರುತ್ತದೆ. ನೂರಾರು ಶತಮಾನದ ಗೌಡ ಜನಾಂಗವೊಂದು ಕಾಲ ಚಕ್ರದ ಬಂಡಿಯಲ್ಲಿ ಏರಿ ಬಂದ ದಿಣ್ಣೆ ಕಂದಕ, ಸಮಾಜದಲ್ಲಿ ಸೀಳಿ ಬಾಳಿದ ಬದುಕಿನ ಮುಡಿ. ತಾನಿದ್ದ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ಪಾಳೆಗಾರಿಕೆ, ನಾಯಕತ್ವದ ಗತ್ತು. ರಾಜ ಮಹಾರಾಜರಾಗಿ ಆಳಿದ ಗಮ್ಮತ್ತು, ಇನ್ನಿತರ ಹಿಂದುಳಿದ ಜಾತಿ ಪಂಗಡಗಳಿಗೆ ತನ್ನ ನಾಯಕತ್ವದಲ್ಲಿ ವಹಿಸಿಕೊಟ್ಟ ಸಾಮಾಜಿಕ ಜವಾಬ್ದಾರಿ, ಧಾರ್ಮಿಕ ಹಕ್ಕು,ನಿರ್ವಹಿಸಲು ಕೊಟ್ಟ ನಿಯಮಗಳು ಹೇಳುತ್ತಿವೆ ಈಗಲೂ ಗೌಡರು ನಡೆಸಿಕೊಂಡು ಬರುತ್ತಿರುವ ತಮ್ಮ ಸಂಸ್ಕೃತಿ ಆಚರಣೆ. ಹಿಂದೂ, ಮುಸ್ಲಿಂ, ರಾಜರ ಅಸ್ಥಾನವೇ ಆಗಿರಲಿ ಸ್ವತ ಗೌಡ ರಾಜನೇ ಆಗಿರಲಿ, ಬ್ರಿಟಿಷರ ಆಡಳಿತವೇ ಆಗಿರಲಿ ಎಲ್ಲೆಲ್ಲಿ ಗೌಡ ಸಂತಾನವಿತ್ತೋ ಅಲ್ಲೆಲ್ಲ ನ್ಯಾಯ, ನೀತಿ,ಮುಂದಾಳತ್ವ, ಧರ್ಮ ನೆಲೆ ನಿಂತಿತ್ತು. ಊರಿನ ಪಟೇಲನಾದ ಗೌಡ ಜನಾಂಗದ ಹಿಂದಿನ ಕಾಲದ ಪದ್ಧತಿಗಳು, ವಿಚಾರಗಳು ಆಧುನಿಕ ಯುಗದಲ್ಲಿ ಪರ ದೇಶದ ಸಂಸ್ಕೃತಿಗೆ ಮಾರು ಹೋಗುತ್ತಿರುವ ಈಗಿನ ಕಾಲದ, ಮುಂದಿನ ಕಾಲದ, ಯುವ ಪೀಳಿಗೆ, ಮತ್ತು ನಿಧಾನವಾಗಿ ಈಗಿನ ಹಿರಿಯರು ಸಹ ಪದ್ಧತಿ ಬಳಕೆಯಿಂದ ವಿಮುಖನಾಗುತ್ತಿರುವ ವೇಳೆಗೆ ಮತ್ತೆ ತಮ್ಮ ಜನಾಂಗದ ಆಚರಣೆ, ವಿಚಾರ, ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ಪುತ್ತೂರ ಗೌಡ ಮುತ್ತು ಬೆಂಗಳೂರಿನ ಖ್ಯಾತ ಉದ್ಯಮಿ ಅನಂತರಾಜ ಅವರು. ಇತಿಹಾಸದ ಕಾಲ ಗರ್ಭದಲ್ಲಿ ಮುಚ್ಚಿ ಹೋಗಿದ್ದ ಗೌಡ ಪರಂಪರೆ ಇವರ ಜನ್ಮದಾತತ್ವದಲ್ಲಿ ಮತ್ತೆ ಸರಿದ ಕಸದಲ್ಲಿ ತೊಳೆದು ಮೂಡಿ ಜೀವಿಸಿದೆ ಹಸಿಗೂಸು. ಅಳಿದು, ಉಳಿದು, ಮರೆತು, ಸೇರಿ, ಮರೆಯುತ್ತಿರುವ ಗೌಡ ಸಂಸ್ಕೃತಿಯನ್ನು ಮತ್ತೆ ಬೆಳೆಸುವ ಹೊಣೆಯಿದೆ. ಈ ನಿಟ್ಟಿನಲ್ಲಿಗೌಡ ಜನಾಂಗದ ಪ್ರತಿಯೊಂದು ಮನೆಯಲ್ಲಿ ಇರಲಿ ಈ ಸಮಗ್ರ ಮಾಹಿತಿ ಒಳಗೂಡಿದ ಈ ಕೃತಿ. ಇಲ್ಲವೇ ಕನಿಷ್ಠ ಪಕ್ಷ ಕುಟುಂಬವೊಂದರ ಐನ್ ಮನೆಯಲ್ಲಿ ಬೆಳಗಲಿ ಲೇಖಕರು ಪಟ್ಟ ಶ್ರಮ. ನಮ್ಮೊಂದಿಗೆ ನಮ್ಮ ಪರಿಸರದ ಸರ್ವ ಧರ್ಮ, ಸರ್ವ ಉಪ ಜಾ ತಿಗಳು ಅರಿಯಲಿ ಮೈಗೂಡಿಸಿಕೊಲ್ಲಲಿ,ಇನ್ನೊಬ್ಬರಿಗೆ ತಿಳಿಹೇಳಲು ಕೊಂಡುಕೊಳ್ಳುವಷ್ಟು ವಿಚಾರಗಳನ್ನು ಹೊಂದಿದೆ ಈ ಗೌಡ ಪರಂಪರೆ 10 ಕುಟುಂಬ 18 ಗೋತ್ರ ದ ಹೆಸರಿನ ಕೃತಿ. ಒಂದು ವೇಳೆ ಪುಸ್ತಕ ಖರೀದಿಗೂ ಜಿಪುಣತೆ ತೋರುವ ಪರಿಚಿತರಿಗೆ ಓದಿ ಮತ್ತೆ ಹಿಂತಿರುಗಿಸುವವರಿಗೆ ನನ್ನಲ್ಲಿದೆ ಈ ಪುಸ್ತಕ. ಇದೊಂದು ತುಂಬದೆ ಅಲ್ಲಾಡುವ ಅರ್ಧ ಕೊಡದ ಕೊಡವಲ್ಲ. ವಿಚಾರಧಾರೆಯ ನೀರು ತುಂಬಿ ತುಳಕದೇ ಇರುವ ಸಮಸ್ತ ಜನರ ಸಂಸ್ಕೃತಿ ದಾಹ ನೀಗುವ ಪುಸ್ತಕ. ಖರೀದಿಮಾಡೋಣ, ಖರೀದಿಸಲು ಪ್ರೇರಣೆಕೊಡೋಣ.
Aravinda Chokkadi–Author
ಪುತ್ತೂರು ಅನಂತರಾಜ ಗೌಡ ಅವರು ಬರೆದಿರುವ ' ಗೌಡ ಪರಂಪರೆ 10 ಕುಟುಂಬ 18 ಗೋತ್ರ' ಪುಸ್ತಕವನ್ನು ಕೇವಲ ಕುತೂಹಲದಿಂದ ಓದಿದೆ. ನಾನು ಜನಾಂಗೀಯ ಅಧ್ಯಯನಕಾರನಾಗಲಿ, ಜನಪದ ಅಧ್ಯಯನಕಾರನಾಗಲಿ ಅಲ್ಲದಿರುವುದರಿಂದ ಇದು ಕೇವಲ ಆಸಕ್ತಿ ಮತ್ತು ಕುತೂಹಲದ ಓದೇ ಹೊರತು ಅಧ್ಯಯನ ಉದ್ದೇಶದ ಓದಲ್ಲ. ಇಲ್ಲಿರುವ ಹಲವು ವಿಷಯಗಳು ಬೇರೆ ಬೇರೆ ಸಂದರ್ಭದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಸಂಗತಿಗಳಾಗಿವೆ. ಅಂತಹ ಸಂಗತಿಗಳನ್ನು ಮತ್ತು ಇದು ವರೆಗೆ ಹೆಚ್ಚು ಚರ್ಚೆಗೊಳಗಾಗಿರದ ಸಂಗತಿಗಳನ್ನು ಕ್ರೋಢೀಕರಿಸಿ ಸಮುದಾಯದ ನೆಲೆಗಟ್ಟಿನಲ್ಲಿ ಅನಂತರಾಜ ಗೌಡರು ವಿಸ್ತೃತ ಚರ್ಚೆ ನಡೆಸಿದ್ದಾರೆ. ಗೌಡ ಸಮುದಾಯದ ವಲಸೆ ಮತ್ತು ಅದರ ಹಿಂದಿರುವ ಮತಧಾರ್ಮಿಕ ಸಂಗತಿಗಳ ಅಭಿಪ್ರೇರಣೆಯ ವಿಷಯಗಳು ಸ್ವಾರಸ್ಯಕರವಾಗಿದೆ. ಇತಿಹಾಸದ ಉದ್ದಕ್ಕೂ ಜಾತ್ಯಂತರ, ಮತಾಂತರ ನಡೆದ ಬಗ್ಗೆ, ಹಿಮ್ಮರಳುವಿಕೆ ಆದ ಬಗ್ಗೆ ಹೇಳುವ ಕೃತಿಯು ವ್ಯವಸ್ಥೆ ಮತ್ತು ಮಾನವ ಸ್ವಭಾವದ ಚಲನಶೀಲತೆಯನ್ನು ನಿರೂಪಿಸುವಲ್ಲಿ ಸಫಲವಾಗಿದೆ. ಬೇರೆ ಬೇರೆ ಜಾತಿ-ಮತಧರ್ಮಗಳು ಪರಸ್ಪರ ಪ್ರಭಾವಿಸಿ ವಿಲೀನಗೊಳ್ಳುವುದು ಮತ್ತು ಹಾಗೆ ವಿಲೀನಗೊಂಡ ನಂತರವೂ ಅನನ್ಯತೆಯನ್ನು ಉಳಿಸಿಕೊಳ್ಳುವುದನ್ನು ಕಾಣಿಸುವ ಕೃತಿಯು ಎಲ್ಲ ಸಮುದಾಯಗಳ ಇತಿಹಾಸದ ರಚನೆ ಮತ್ತು ಪರಿಷ್ಕರಣೆಗೆ ಪೂರೊವಾಗಿದೆ. ಉದಾಹರಣೆಗೆ ಕೃತಿಯಲ್ಲಿ ಗೌಡರು ಮೂಲತಃ ಅಹಿಚ್ಛತ್ರದವರಾಗಿದ್ದು ಅಲ್ಲಿಂದ ವಲಸೆ ಪ್ರಾರಂಭ ಆಗಿರುವ ವಿಷಯವಿದೆ. ಹವ್ಯಕ ಸಮುದಾಯದವರೂ ಮೂಲತಃ ಅಹಿಚ್ಛತ್ರದವರೆಂದು ಮತ್ತೊಂದುಸಮುದಾಯದ ಅಧ್ಯಯನದ ಅಂಶವಾಗಿದೆ. ಹಾಗಿದ್ದರೆ ಈ ಅಹಿಚ್ಛತ್ರ ಎಷ್ಟು ಸಮುದಾಯಗಳಿಗೆ "ಛತ್ರ" ವಾಗಿತ್ತು! ಎನ್ನುವ ಸ್ವಾರಸ್ಯಕರ ಅಧ್ಯಯನಕ್ಕೆ ಈ ಅಂಶ ಪ್ರೇರಣಾದಾಯಿಯಾಗಿದೆ. ' ಗುರುಮನೆಯವರೇ, ಅರಮನೆಯವರೇ, ಕಟ್ಟೆಮನೆಯವರೇ, ಮಾಗಣೆಯವರೇ, ಊರಗೌಡರೇ, ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು ಬಂಧವರೇ" ಎಂದು ಗೌಡರಲ್ಲಿ ಬರುವ ಪ್ರಾರ್ಥನೆಯ ವಿವರ ನನಗೆ ಗೊತ್ತಿದೆ. ಆದರೆ ಈ ಪ್ರಾರ್ಥನೆಯ ಹಿಂದೆ ಎಷ್ಟೊಂದು ದೊಡ್ಡ ಇತಿಹಾಸವಿದೆ ಎನ್ನುವುದು ಗೊತ್ತಿಲ್ಲ. ಗೌಡರಿಗೆ ಗುರುಮನೆ ಶೃಂಗೇರಿ, ಅರಮನೆ ಇಕ್ಕೇರಿ ಎನ್ನುವ ವಿಚಾರ ಗೌಡ ಸಮುದಾಯದ ಒಟ್ಟಾರೆ ಸಾಂಸ್ಕೃತಿಕ ತೊಡಗಿಕೊಳ್ಳುವಿಕೆಯನ್ನು ಪ್ರತ್ಯೇಕವಾದ ಧಾರ್ಮಿಕ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡಬೇಕಾದ ಅಗತ್ಯವನ್ನು ಸೂಚಿಸುತ್ತದೆ. ಒಂದು ಸಮುದಾಯದ ಇತಿಹಾಸವನ್ನು ಕಟ್ಟುವುದು ಬಹಳ ಕಠಿಣವಾದ ಕೆಲಸ. ಇತಿಹಾಸವನ್ನು ಕಟ್ಟುವಾಗ ವ್ಯಕ್ತಿಯ ವರ್ತನೆಗಳಲ್ಲಿನ ಸಾಮಾನ್ಯೀಕೃತ ಸಂಗತಿಗಳನ್ನು ಸಮುದಾಯದ ವರ್ತನೆಗಳೆಂದು ಭಾವಿಸಿಕೊಳ್ಳಬೇಕಾಗುತ್ತದೆ. ಅಂತಹ ವರ್ತನೆಗಳು ಕಾಲಾನುಕ್ರಮದಲ್ಲಿ ಬದಲಾಗಿಯೂ ಅನನ್ಯತೆಯನ್ನು ಉಳಿಸಿಕೊಳ್ಳುತ್ತದೆ. ಆಗ ಈ ಬದಲಾವಣೆಗಳಿಗೆ ಮತ್ತು ಅನನ್ಯತೆಗೆ ಕಾರಣಗಳನ್ನು ಸಂಶೋಧಿಸಬೇಕು. ಹೀಗೆ ಕಂಡುಕೊಂಡಾಗಲೂ ವಿಶ್ಲೇಷಣೆಗೆ ಸಿಗಲಾರದ ಹಲವು ಸಂಗತಿಗಳು ಇರುತ್ತವೆ. ಮತ್ಯಾವುದೊ ಕಾಲದಲ್ಲಿ ಅವು ವಿಶ್ಲೇಷಣೆಗೆ ಒಳಗಾಗಲು ಸಾಧ್ಯವಾಗುತ್ತದೆ. ಈ ರೀತಿಯ ಸಾಧನೆ-ಸವಾಲುಗಳು ಈ ಕೃತಿಯಲ್ಲೂ ಇವೆ. ಈ ಎಲ್ಲದರ ನಡುವೆಯೂ ಅನಂತರಾಜ ಗೌಡರು ಗೌಡ ಸಮುದಾಯದ ಇತಿಹಾಸವನ್ನು ಕಾಣಿಸುವ ಸಾರ್ಥಕ ಪ್ರಯತ್ನವನ್ನು ಮಾಡಿದ್ದಾರೆ. ಅದಕ್ಕಾಗಿ ಅನಂತರಾಜ ಗೌಡರು ಅಭಿನಂದನಾರ್ಹರು. - ಅರವಿಂದ ಚೊಕ್ಕಾಡಿ