
Category: | ಕನ್ನಡ |
Sub Category: | ಲೇಖನಗಳು, ಪ್ರಬಂಧಗಳು |
Author: | ಕೆ. ಸತ್ಯನಾರಾಯಣ | K Satyanarayana |
Publisher: | Amulya pustaka |
Language: | Kannada |
Number of pages : | |
Publication Year: | 2025 |
Weight | 500 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಗಿರೀಶ್ ವಿ. ವಾಘ್, ೮.೨.೨೦೨೫ರಂದು ತಮ್ಮ ಎಪ್ಪತ್ತಾರನೇ ವಯಸ್ಸನ್ನು ಪ್ರವೇಶಿಸಿದ ಕೆಲವೇ ದಿನಗಳಲ್ಲಿ ತೀರಿಕೊಂಡರು. ಕೊನೆಯ ಮೂರು ನಾಲ್ಕು ವರ್ಷಗಳ ಕಾಲ ಅನಾರೋಗ್ಯ ಅವರನ್ನು ಹೈರಾಣಾಗಿಸಿತ್ತು. ವಾಸ, ವಾಸ್ತವ್ಯ, ವಿಳಾಸ, ಚಿಕಿತ್ಸೆ, ಸಂರ್ಕ ಎಲ್ಲವೂ ಅಡ್ಡಾದಿಡ್ಡಿಯಾಗಿತ್ತು. ಅವರನ್ನು ಸಂಪರ್ಕಿಸುವುದು, ಭೇಟಿ ಮಾಡುವುದೇ ಕಷ್ಟವಾಗುತ್ತಿತ್ತು. ಅವರ ಸೋದರ, ಸೋದರಿಯ ಕುಟುಂಬದ ಸದಸ್ಯರ ಮೂಲಕ ಕೆಲವು ವಿವರಗಳು ತಿಳಿಯುತ್ತಿತ್ತು. ತೀರಿಕೊಳ್ಳುವ ಸುಮಾರು ಎರಡು ತಿಂಗಳ ಮುಂಚೆ ಮಾಲತಿಯವರು ದೂರವಾಣಿಯ ಮೂಲಕ ಮಾತಾಡಿಸಿದ್ದರು. ಆವಾಗಲೂ ಕೂಡ ಅವರು ತಮ್ಮ ಬಗ್ಗೆ, ಅನಾರೋಗ್ಯ, ಚಿಕಿತ್ಸೆಯ ಬಗ್ಗೆ ಮಾತನಾಡಲು ಯಾವ ಉತ್ಸಾಹವನ್ನೂ ತೋರಿಸಲಿಲ್ಲ. ನನ್ನ ಬಗ್ಗೆ, ನನ್ನ ಬರವಣಿಗೆಯ ಬಗ್ಗೆ, ನನ್ನ ಮಕ್ಕಳು, ಮೊಮ್ಮಕ್ಕಳ ಬಗ್ಗೆಯೇ ವಿಚಾರಿಸಿದರು. ತಾವು ಆರೋಗ್ಯವಾಗಿರುವುದಾಗಿ ತಿಳಿಸಿದರು. ಅವರನ್ನು, ಅವರ ಸ್ವಭಾವವನ್ನು ಹತ್ತಿರದಿಂದ ಬಲ್ಲವರಾಗಿದ್ದ ಕೆಲವರಿಗೆ ಅವರು ತೀರಿಹೋದ ಸಂಗತಿ ತಿಳಿಸಿದೆ. ಕೆಲವರು ಸಂದೇಶ ಕಳಿಸಿದರು, ಕೆಲವರು ಕರೆ ಮಾಡಿದರು, ಕೆಲವರು Emoji ಮೂಲಕ ಸ್ಪಂದಿಸಿದರು. ಅವರು ತೀರಿಕೊಂಡಿದ್ದನ್ನು ಸುದ್ದಿ ಮಾಡಲೇ ಎಂದು ಯೋಚಿಸಿದೆ. ಕೆಲವು ವರ್ಷಗಳ ಕಾಲ ಅವರು ಪುಸ್ತಕ ಸಮೀಕ್ಷೆ ಮಾಡುತ್ತಿದ್ದ ಕನ್ನಡ ಪ್ರಭ ಪತ್ರಿಕೆ ನೆನಪಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯಲೇ ಅನಿಸಿತು. ಆದರೆ ಯಾವಾಗಲೂ ಖಾಸಗಿಯಾಗಿಯೇ ಬದುಕುತ್ತಿದ್ದ, ಸಾರ್ವಜನಿಕ ವ್ಯಕ್ತಿಯಾಗಲು ಕಿಂಚಿತ್ತೂ ಇಷ್ಟಪಡದ ಗಿರೀಶರ ವ್ಯಕ್ತಿತ್ವದ ಘನತೆಗೆ ಕುಂದು ಬರಬಹುದು ಎನಿಸಿತು. ಡಿವಿಜಿಯವರ “ವನಸುಮದೊಳಗೆನ್ನ ಜೀವನವು ವಿಕಸಿಸುವಂತೆ” ಕವನದ ಸಾಲುಗಳು ಮತ್ತೆ ಮತ್ತೆ ನೆನಪಿಗೆ ಬರುತ್ತಲೇ ಇತ್ತು, ಬರುತ್ತಲೇ ಇದೆ. ಗಿರೀಶರು ಬದುಕಿದ ರೀತಿ, ಓದಿ ಬರೆಯುತ್ತಿದ್ದ ರೀತಿ, ಪುಸ್ತಕಗಳನ್ನು ಸಂಗ್ರಹಿಸುತ್ತಿದ್ದ, ದಾನ ಕೊಡುತ್ತಿದ್ದ ರೀತಿ ಇದೆಲ್ಲವನ್ನು ಅವರ ಬರವಣಿಗೆಯೊಡನೆ ಸೇರಿಸಿ ಒಂದು ಪುಸ್ತಕ ಮಾಡಿದರೆ ಹೇಗೆಂಬ ಯೋಚನೆ ಬಂತು. ಪುಸ್ತಕ ಸಮೀಕ್ಷೆಗಳನ್ನಲದೆ ಅವರು ಇಂಗ್ಲಿಷ್, ಕನ್ನಡ ಪತ್ರಿಕೆಗಳಿಗೆ ವಾಚಕರ ವಾಣಿ ವಿಭಾಗಕ್ಕೆ ಬರೆಯುತ್ತಿದ್ದ ಪತ್ರಗಳು, ಟಿಪ್ಪಣಿಗಳು, ಕಿರು ಪತ್ರಿಕೆಗಳಲ್ಲಿ ಬರೆದ ವಿಮರ್ಶಾ ಲೇಖನಗಳು ನೆನಪಾದವು. ಆದರೆ ಇವೆಲ್ಲ ಲಭ್ಯವಿರಲಿಲ್ಲ. ಇವುಗಳನ್ನು ಹುಡುಕಲು, ಜೋಡಿಸಲು ಕುಟುಂಬದವರು ಮಾಡಿದ ಪ್ರಯತ್ನ ಕೂಡ ಸಫಲವಾಗಲಿಲ್ಲ. ಗಿರೀಶರ ವಿಮರ್ಶಾ ಲೇಖನಗಳ ಸಂಪುಟವೊಂದು ಪ್ರಕಟವಾಗಬೇಕೆಂದು ನಾಡಿನ ಗಣ್ಯ ವಿಮರ್ಶಕರು ಸೂಚಿಸಿದ್ದರೂ ಗಿರೀಶರಿಗೆ ಯಾವ ರೀತಿಯ ಉತ್ಸಾಹವೂ ಇರಲಿಲ್ಲ. ೨೦೦೯ರಲ್ಲಿ ನಾನು ಪ್ರಕಟಿಸಿದ್ದ “ಖಾಸಗಿ ವಿಮರ್ಶೆ” ಸಂಕಲನದಲ್ಲಿ ಗಿರೀಶರ ಎರಡು ಪತ್ರಗಳನ್ನು ಪ್ರಕಟಿಸಿದ್ದೆ. ೨೦೨೧ರಲ್ಲಿ ಪ್ರಕಟಿಸಿದ ʼಕಪಾಳಮೋಕ್ಷ ಪ್ರವೀಣʼ ಸ್ವಭಾವ ಚಿತ್ರಗಳ ಸಂಪುಟದಲ್ಲಿ ಅವರ ಸ್ವಭಾವ ಚಿತ್ರವನ್ನು ಬರೆದಾಗಲೂ ಒಪ್ಪದೇ ಪ್ರತಿಭಟಿಸಿದ್ದರು. ಸ್ನೇಹಶೀಲರಾಗಿದ್ದರೂ ಅವರಿಗೆ ಜನರನ್ನು ಪರಿಚಯ ಮಾಡಿಕೊಳ್ಳುವುದರಲ್ಲಿ, ಮೇಲೆ ಬಿದ್ದು ಒಡನಾಡುವುದರಲ್ಲಿ ಉತ್ಸಾಹವಿರಲಿಲ್ಲ. ಆದರೆ ಆಡುವ ಮಾತುಗಳನ್ನು ನೇರವಾಗಿ ಆಡುತ್ತಿದ್ದರು. ಯಾವ ಸಂಗತಿಗಳನ್ನೂ ಮುಚ್ಚಿಡುತ್ತಿರಲಿಲ್ಲ. ವೈಯಕ್ತಿಕ ಸಂಗತಿಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಒಂದು ಸಂದರ್ಭ ನೆನಪಾಗುತ್ತದೆ – ಅವರ ಬರವಣಿಗೆಯ ರೀತಿಯನ್ನು ಮೆಚ್ಚಿದ್ದ ಸುಮತೀಂದ್ರ ನಾಡಿಗರು ಗಿರೀಶರನ್ನು ಭೇಟಿ ಮಾಡುವ, ಮಾತನಾಡಿಸುವ ಉತ್ಸುಕತೆ ತೋರಿದರು. ಗಿರೀಶರು ಬೇಡ, ಬೇಡ ಎಂದು ಹೇಳುತ್ತಲೇ ಬಂದರು. ಗೋಖಲೆ ವಿಚಾರ ಸಂಸ್ಥೆಯ ಒಂದು ಸಮಾರಂಭಕ್ಕೆ ಗಿರೀಶ್ ಕೆಂಗೇರಿಯಿಂದ ಬಂದಿದ್ದರು. ಸಭಿಕರ ಗುಂಪಿನಿಂದ ದೂರದಲ್ಲಿ ಹೊರ ಆವರಣದಲ್ಲಿ ನಿಂತಿದ್ದರು. ನಾಡಿಗರೂ ಬಂದಿದ್ದರು. ವಾಘ್ ಬಂದಿದ್ದಾರೆಂದು ತಿಳಿಸಿದೆ. ಸರಿ ನಾನೇ ಅವರ ಬಳಿ ಬಂದು ಮಾತನಾಡುತ್ತೇನೆ ಎಂದು ಹೊರಟರು. ನಾಡಿಗರಿಗೂ ವಯಸ್ಸಾಗಿತ್ತು. ನಡಿಗೆಯಲ್ಲಿ ಚುರುಕಿರಲಿಲ್ಲ. ನಿಧಾನವಾಗಿ ಹೆಜ್ಜೆ ಹಾಕುತ್ತಾ ಮೆಟ್ಟಲಿಳಿದು ಬಂದರು. ಅವರು ಹತ್ತಿರ ಬರುವ ಹೊತ್ತಿಗೆ ವಾಘ್ ಹಿಂದೆ ಸರಿಯುತ್ತಿದ್ದರು. ನಾಡಿಗರು ಸಮೀಪ ಬಂದು ಪರಿಚಯ ಹೇಳಿಕೊಂಡು ಗಿರೀಶರ ಬರವಣಿಗೆಯ ಬಗ್ಗೆ ಒಂದೆರಡು ವಾಕ್ಯ ಹೇಳಿದರು. ಗಿರೀಶರ ಮುಖ ಸಪ್ಪಗಾಯಿತು. ತೊದಲಿದರು, ಹಿಂದೆ ಸರಿದರು. ಪ್ರಧಾನ ಮಂತ್ರಿ, ಮುಖ್ಯ ಮಂತ್ರಿಗಳನ್ನು ಕೂಡ ಎಗ್ಗಿಲ್ಲದೆ ಮಾತಿಗೆ ಎಳೆಯುತ್ತಿದ್ದ ನಾಡಿಗರು ಇವರನ್ನು ಮಾತಿಗೆಳೆಯುವುದರಲ್ಲಿ ವಿಫಲರಾದರು. ಒಂದೊಂದೂವರೆ ನಿಮಿಷದಲ್ಲಿ ಭೇಟಿ ಮುಗಿದೇ ಹೋಯಿತು. ಗಿರೀಶರನ್ನು ಹುಡುಕಿದೆ. ಅವರು ಸಿಗಲೇ ಇಲ್ಲ. - ಕೆ. ಸತ್ಯನಾರಾಯಣ (ಸಂಪಾದಕರ ಮಾತುಗಳಿಂದ)
ಕೆ. ಸತ್ಯನಾರಾಯಣ | K Satyanarayana |
0 average based on 0 reviews.