#
ಶ್ರೀಮತಿ ಸುಖಲಾಕ್ಷಿಯವರು ಅನೇಕ ಬಗೆಯ ಲೇಖನಗಳನ್ನಿಲ್ಲಿ ಸಂಕಲಿಸಿದ್ದಾರೆ. ಮುಂಬಯಿಗಷ್ಟೇ ಸೀಮಿತಗೊಳಿಸದೆ, ಮಹಾರಾಷ್ಟ್ರದ ಹಿನ್ನೆಲೆಯೊಂದಿಗೆ, ಭಾಷೆ- ಸಂಸ್ಕೃತಿ, ಕೃಷಿಪದ್ಧತಿ, ರಂಗಭೂಮಿ, ನೃತ್ಯಕಲೆ ಇತ್ಯಾದಿ ಮತ್ತು ವಿವಿಧ ವಿಷಯಗಳ ಮೂವತ್ತಕ್ಕೂ ಮಿಕ್ಕಿದ ಬರೆಹಗಳಿವೆ. ಇದೊಂದು ಸಂಕೀರ್ಣ ಸಾಹಿತ್ಯ ಪ್ರಕಾರದ ಅಭಿವ್ಯಕ್ತಿ! ಇಲ್ಲಿ ಸಂದರ್ಭ ಚಿತ್ರಗಳಿವೆ, ವ್ಯಕ್ತಿಚಿತ್ರಗಳಿವೆ, ಸಾಮಾಜಿಕ ಹಿನ್ನೆಲೆಯ ಬರೆಹಗಳಿವೆ, ಸಾಧನಾ ಪಥಗಳ ದಾಖಲಾತಿಗಳೂ ಇವೆ! ವಿಶೇಷತಃ ಮಹಿಳೆಯರ ಸಾಧನೆಗಳನ್ನಿಲ್ಲಿ ರೇಖಿಸುವ ಪ್ರಯತ್ನವಿದೆ. ಏಷಿಯಾದ ಅತಿದೊಡ್ಡ ಕೊಳೆಗೇರಿಯೆನಿಸಿದ ಧಾರಾವಿಯ ವ್ಯಾವರ್ಣನೆಯೂ, ಕಾಮಾಟಿಪುರದ 'ಕೆಂಪುದೀಪ'ದ ಪ್ರದೇಶವೂ, ತೃತೀಯ ಲಿಂಗಿಗಳ ಪ್ರಸ್ತಾಪಗಳ ಸಹಿತ ಅನೇಕ ಸಾಂಸ್ಕೃತಿಕ ವಿಚಾರಗಳೂ ಇಲ್ಲಿ ಹಾದುಹೋಗುತ್ತವೆ. ಅನೇಕ ಲೇಖನಗಳ ಸಂಚಯನದ ಈ ಕೃತಿಯಲ್ಲಿ ಅತ್ಯಂತ ಸರಳವೂ " ನೇರವೂ ಆದ ಬಗೆಯಲ್ಲಿ ನಿರೂಪಿಸಿರುವ ಪ್ರಯತ್ನದ ಸಾಫಲ್ಯವನ್ನು ಕಾಣಬಹುದು
ಇತಿಹಾಸವನ್ನು ಯಥಾವತ್ತಾಗಿ ದಾಖಲಿಸುವುದು ಪ್ರಜ್ಞಾವಂತ ನಾಗರಿಕನ ಲಕ್ಷಣ. ಸಮಾಜೋಧಾರ್ಮಿಕ ಚಳುವಳಿಯೊಂದರ ರಾಜಕೀಯ ಮಾನ್ಯತೆಗಾಗಿ ಶತಶತಮಾನಗಳಿಂದ ನಡೆದ ಚಳುವಳಿಯ ಮುಂದುವರಿದ ಭಾಗವಾಗಿ ೨೦೧೭-೧೮ರ ಲಿಂಗಾಯತ ಚಳುವಳಿ ವಿಪ್ಲವವಾಗಿ ಮಾರ್ಪಟ್ಟು, ಮನುಕುಲದಲ್ಲಿ ವೈಚಾರಿಕತೆಯನ್ನು ಬಡಿದೆಬ್ಬಿಸಿ, ಯಶಸ್ಸು ಕಾಣುತ್ತಿರುವ ಹೋರಾಟದ ಏಳುಬೀಳುಗಳ ವಿವಿಧ ಮಜಲುಗಳನ್ನು ಓದುಗನ ಕಣ್ಣಿಗೆ ಕಟ್ಟಿದಂತೆ ಅಕ್ಷರಗಳ ಚಿತ್ರ ಚಿತ್ರಿಸುವ ಮಾಂತ್ರಿಕತೆಯ ಕಲೆ ಜಿ. ಬಿ. ಪಾಟೀಲರಿಗೆ ಸಿದ್ದಿಸಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಅಲ್ಪಸಂಖ್ಯಾತ ಧರ್ಮ ಮಾನ್ಯತೆ ಪಡೆಯುವ ಹೊಸ್ತಿಲಲ್ಲಿರುವ ಈ ಜನಾಂದೋಲನದ ಇತಿಹಾಸ ದಾಖಲಿಸುವ ಈ ಕೃತಿಗೆ ಅಭಿನಂದನೆ ಸಲ್ಲಿಸುವುದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷನಾದ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಕರ್ನಾಟಕ ಸರ್ಕಾರವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಿ, ಅದನ್ನು ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕೇಂದ್ರಕ್ಕೆ ರವಾನಿಸಿದೆ. ಸುಮಾರು ಆರು ವರ್ಷಗಳ ನಂತರ 'ಹಿಸ್ಟಾರಿಕಲ್ ಡಾಕ್ಯುಮೆಂಟರಿ' ರೂಪದಲ್ಲಿ ಈ ಗ್ರಂಥವನ್ನು ಪ್ರಕಟಿಸುತ್ತಿರುವುದು ಜಿ. ಬಿ. ಪಾಟೀಲರ ಸಾಧನೆಯ ಸಿಂಹಾವಲೋಕನದ ಬಗೆ ಹಾಗೂ ಮುಂದಿನ ಸಾಧನೆಯ ದಿಕ್ಕೂಚಿ. ಲೇಖನದ ಈ ಕೈಂಕರ್ಯ ಲಿಂಗಾಯತರಿಗೆ ಮಾತ್ರವಲ್ಲದೆ ಸರ್ವರಿಗೂ ಮಾರ್ಗದರ್ಶಿ ದೀವಿಗೆ. ಅವರನ್ನು ಬಲ್ಲ ನನಗೆ ಈ ಕಾರ್ಯ ಸಾಧನೆ ಸಂತೋಷವನ್ನುಂಟು ಮಾಡಿದೆ ಎನ್ನುತ್ತ ಶುಭಹಾರೈಸುವೆ. - ಬಸವರಾಜ ಹೊರಟ್ಟಿ ( ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು )