ರಾತ್ರಿ ಅಗಸ ನೋಡುತ್ತಾ ಮಲಗಿದ್ದ ಶ್ರೀಲಕ್ಷ್ಮಿ ತಂದೆಗೆ ದಿಢೀರೆಂದು ಪ್ರಶ್ನೆ ಹಾಕಿದಳು. 'ಪಪ್ಪಾ, ಭೂಮಿ ದುಂಡಾಗಿರುವುದರಿಂದ ತಿರುಗುತ್ತಿದೆ. ಒಂದು ವೇಳೆ ಚಪ್ಪಟೆಯಾಗಿದ್ದರೆ ತಿರುಗುತ್ತಿತ್ತೇ? ಭೂಮಿ ಚಪ್ಪಟೆಯಾಗಿದ್ದರೆ ಏನೆಲ್ಲಾ ಬದಲಾವಣೆಗಳು ಆಗುತ್ತಿದ್ದವು?' ಎಂದು ಪ್ರಶ್ನಿಸಿದಳು. ರಾತ್ರಿ ಹಾಲಿವುಡ್ ಸಿನಿಮಾ ನೋಡಿದ ಸಿಂಧು ತಡವಾಗಿ ಮಲಗಿದಳು. ಸಿನಿಮಾ ಗುಂಗಿನಲ್ಲೇ ಮಲಗಿದ್ದರಿಂದ ಯಾವುದೋ ಆಕಾಶಕಾಯವೊಂದು ಭೂಮಿಗೆ ಅಪ್ಪಳಿಸಿದಂತೆ, ಭೂಮಿಯು ಓಲಾಡಿದಂತೆ ಕನಸು ಕಾಣುತ್ತಾ ಮಂಚದಿಂದ ದೊಪ್ಪನೆ ಕೆಳಕ್ಕೆ ಬಿದ್ದಳು. ಎಚ್ಚರಗೊಂಡು ವ್ಯಾಯಾಮದಲ್ಲಿ ನಿರತರಾದ ತಂದೆಗೆ 'ಪಪ್ಪಾ ಕ್ಷುದ್ರಗ್ರಹಗಳೆಂದರೇನು? ಅವು ಭೂಮಿಗೆ ಬಡಿದರೆ ಏನಾಗುತ್ತೆ?' ಎಂದು ಕೇಳಿದಳು. 'ತಾತ, ನಮ್ಮ ಭೂಮಿಯ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಸತಿಗಾಗಿ ಇನ್ನೊಂದು ಗ್ರಹವನ್ನು ಹುಡುಕುತ್ತಿದ್ದಾರಂತೆ. ಇನ್ನೊಂದು ಗ್ರಹ ಹುಡುಕುವ ಬದಲು ಕೃತಕ ಗ್ರಹವನ್ನೇ ಸೃಷ್ಟಿಸಿದರೆ ಏನಾಗುತ್ತೆ?' ಎಂದನು. ಇಂತಹ ಅನೇಕ ತರ್ಲೆ ಪ್ರಶ್ನೆಗಳು ನಿಮಗೆ ಬಂದಿವೆಯಾ? ಅವುಗಳಿಗೆ ಉತ್ತರ ಸಿಕ್ಕಿದೆಯಾ? ಸಿಕ್ಕಿಲ್ಲ ಎಂದಾದರೆ 'ಏನಾಗುತ್ತೆ ಗುರು?' ಎಂಬ ಪುಸ್ತಕ ಖಂಡಿತ ನಿಮ್ಮ ತರ್ಲೆ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಇವುಗಳಲ್ಲದೇ ಭೂಮಿಗೆ ಉಂಗುರಗಳಿದ್ದರೆ?, ಬಾಹ್ಯಾಕಾಶಕ್ಕೆ ಎಲಿವೇಟರ್ ನಿರ್ಮಿಸಿದರೆ?, ಕನಸುಗಳನ್ನು ರೆಕಾರ್ಡ್ ಮಾಡುವಂತಿದ್ದರೆ? ಮನುಷ್ಯರು ಬಾಹ್ಯಾಕಾಶದಲ್ಲಿ ಜನಿಸಿದರೆ? ಸಾಗರಗಳು ಪಾರದರ್ಶಕವಾಗಿದ್ದರೆ? ನಿಮ್ಮ ಊಹಾತ್ಮಕ ಪ್ರಶ್ನೆಗಳಿಗೆ ತಾರ್ಕಿಕ ಉತ್ತರ ಸಿಗುವ ಪುಸ್ತಕ ಏನಾಗುತ್ತೆ ಗುರು?. ಇದರಲ್ಲಿ ಕೌತುಕವಿದೆ. ತರ್ಕವಿದೆ. ವಿಜ್ಞಾನವಿದೆ.